ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಭಾನುವಾರ, ಆಗಸ್ಟ್ 23, 2015

ಪಂ. ಸುಧಾಕರ ಚತುರ್ವೇದಿಯವರ ವಿಚಾರಧಾರೆ - 16: ಮುಗಿಯದ ಪ್ರಶ್ನೆ


ವಿಶ್ವತಶ್ಚಕ್ಷುರುತ ವಿಶ್ವತೋಮುಖೋ ವಿಶ್ವತೋಬಾಹುರುತ ವಿಶ್ವತಸ್ವಾತ್ |
ಸಂ ಬಾಹುಭ್ಯಾಂ ದಮತಿ ಸಂ ಪತತ್ರೈರ್ದ್ಯಾವಾಭೂಮೀ ಜನಯನ್ ದೇವ ಏಕಃ || (ಋಕ್. ೧೦.೮೧.೩.)
     ವೇದಗಳಲ್ಲಿ ಪರಮಾತ್ಮನ ವಿಷಯದಲ್ಲಿ ಸಾವಿರಾರು ಮಂತ್ರಗಳಿವೆ. ಒಂದು ಮಂತ್ರದಲ್ಲಿ 'ತ್ವಂ ಸಂಪ್ರಶ್ನಂ ಭುವನಾಯ . . . . ' 'ಪ್ರಶ್ನೆ ಕೇಳುತ್ತಾ ಹೋಗು' ಅಂತಾ ಇದೆ, ಅವನು ದಯಾಳು ಅಂತ ಇದೆ, ದಯಾಳು ಆಗಿದ್ರೆ ಕಷ್ಟ ಯಾಕೆ ಇರ್ತಿತ್ತು? ಅವನು ನ್ಯಾಯಕಾರಿ, ನ್ಯಾಯ ಮಾಡ್ತಾನೆ ಅಂತ ಇದೆ, ಅನ್ಯಾಯದಿಂದ ಜನ ಏಕೆ ನರಳುತ್ತಾ ಇದ್ದಾರೆ? ಕೇಳುತ್ತಾ ಹೋದಷ್ಟೂ ಇದ್ದೇ ಇದೆ. 'ಸಂಪ್ರಶ್ನಾ'- ಹೀಗೆ ಎಷ್ಟು ಪ್ರಶ್ನೆ ಬೇಕಾದರೂ ಕೇಳು, ಇನ್ನೂ ಇರುತ್ತೆ. ನಾರದ-ಸನತ್ಕುಮಾರ ಸಂವಾದ ಅಂತ ಉಪನಿಷತ್ತಿನಲ್ಲಿ ಬರುತ್ತೆ. ಬಹಳ ಭವ್ಯವಾಗಿದೆ. ಸನತ್ ಕುಮಾರ ಅಂದರೆ ಯಾವಾಗಲೂ ಕುಮಾರನೇ. ವೃದ್ಧಾಪ್ಯವೇ ಇಲ್ಲ. ನಾರದ - ನರರ ಜ್ಞಾನವನ್ನು ನಾರ ಅಂತಾರೆ, ದದಾತಿ - ನರರಿಗೆ ಬೇಕಾದ ಜ್ಞಾನವನ್ನು ಕೊಡುವವನು ನಾರದ! ಇವರಿಬ್ಬರ ಸಂವಾದ ಇದೆಯಲ್ಲಾ, ಇವರು ಇಬ್ಬರು ಯಾವಾಗಲೂ, ಯಾವ ಕಾಲಕ್ಕೂ ಇರುತ್ತಾರೋ, ಈ ಭಗವಂತನೂ ಅಷ್ಟೆ, ಸಂಪ್ರಶ್ನ - ಎಷ್ಟು ಪ್ರಶ್ನೆ ಬೇಕಾದರೂ ಕೇಳುತ್ತಾ ಹೋಗು, ಕೊನೆಗೆ ಪ್ರಶ್ನೆ ಇದ್ದೇ ಇರುತ್ತೆ. ಪ್ರಶ್ನೆಗಳಿಗೆ ಇನ್ನು ಉತ್ತರ ಕೊಡುವುದಕ್ಕೆ ಆಗುವುದಿಲ್ಲವೆಂದಾಗ ಉಂಟಾಗುವ ಆ ಮೌನ ಇದೆಯಲ್ಲಾ ಅದೂ ಭಗವತ್ ಪ್ರೀತಿ. ಅನಿರ್ವಚನೀಯ ಅಂತ ಒಂದು ಪದ ಇದೆ. ಪರಮಾತ್ಮನ ನಿರ್ವಚನವನ್ನು ಅವನು ಹೀಗೆಯೇ ಇದ್ದಾನೆ ಅಂತ ಹೇಳಲು ಸಾಧ್ಯವಿಲ್ಲ, ಯಾರ ಯಾರ ಬುದ್ಧಿಶಕ್ತಿ, ಮೇಧಾಶಕ್ತಿ, ತಪಶ್ಶಕ್ತಿ ಎಷ್ಟೆಷ್ಟು ಹೆಚ್ಚುತ್ತಾ ಹೋಗುತ್ತೋ ಅಷ್ಟಷ್ಟು ಆ ಭಗವಂತನ ಜ್ಞಾನ ಕೂಡಾ ಹೆಚ್ಚುತ್ತಾ ಹೋಗುತ್ತೆ.
ದೇವರು ದೇವರೇ!
     ಆಗ ನಾವು 33 ಕೋಟಿ ಇದ್ದೆವು, ಇವತ್ತು ನಾವು ನೂರು ಕೋಟಿ ಇದೀವಿ, ಲಕ್ಷಣವಾಗಿ. ಒಬ್ಬೊಬ್ಬರ ಮನೆಯಲ್ಲಿ ಎಷ್ಟೊಂದು ದೇವರುಗಳ ಫೋಟೋಗಳಿವೆ, ವಿಗ್ರಹಗಳಿವೆ! ಎಷ್ಟು ದೇವರುಗಳಾದರು? 100 ಕೋಟಿ ಜನ ಇದಾರೆ, ಅದರಲ್ಲಿ ಒಬ್ಬೊಬ್ಬರಿಗೆ ಎಷ್ಟೆಷ್ಟು ದೇವರಿದ್ದಾರೆ ಅಂತ ಲೆಕ್ಕ ಇಲ್ಲ. ಎಷ್ಟು ದೇವರಿದ್ದಾರೆ ಸ್ವಾಮಿ? ಹೀಗೆ ನೋಡ್ತಾ ಹೋದರೆ ನಾಸ್ತಿಕವಾದಕ್ಕೆ ನಾವು ಬರುತ್ತೇವೆ. ಮತ್ತೆ ಜ್ಞಾಪಕ ಇಟ್ಟುಕೊಳ್ಳಬೇಕು, ದೇವರು ದೇವರೇ! ಒಬ್ಬ ಹೇಳ್ತಾನೆ, ‘Where is God?  He is nowhere’, ಅವನು ಎಲ್ಲೂ ಇಲ್ಲ. ಮತ್ತೆ ಇನ್ನೊಬ್ಬ ಹೇಳ್ತಾನೆ, ‘He is now here’, ಈಗ ಇಲ್ಲಿದ್ದಾನೆ ಅವನು. ಇದು ಜ್ಞಾನಕ್ಕೆ ಸಂಬಂಧ ಪಟ್ಟ ಮಾತು. 'ಒಂದು ಮಡಕೆ ತೆಗೆದುಕೊಂಡು ಬಾರಪ್ಪಾ' ಅಂತ ಒಬ್ಬ ಗುರು ಶಿಷ್ಯನಿಗೆ ಹೇಳ್ತಾನೆ. ಅವನು ಮಡಕೆ ತೆಗೆದುಕೊಂಡು ಬರ್ತಾನೆ. 'ಅಯ್ಯೋ, ನನಗೆ ಆ ಮಡಕೆ ಬೇಡಯ್ಯಾ, ಆ ಮಡಕೆ ಯಾವ ಮಣ್ಣಿಂದ ಆಗಿದೆಯೋ ಆ ಮಣ್ಣು ಬೇಕು'. ಆ ಶಿಷ್ಯ ಹೇಳ್ತಾನೆ, 'ಆ ಮಡಕೇನೇ ಚೂರು ಚೂರು ಮಾಡಿ ಸ್ವಾಮಿ, ನಿಮಗೆ ಬೇಕಾದ ಆ ಮಣ್ಣು ಸಿಕ್ಕುತ್ತೆ' ಅಂತ. ಪರಮಾತ್ಮ ಅಸೀಮ, ಪರಿಪೂರ್ಣ. ಈ ಜೀವಾತ್ಮ ಎಷ್ಟು ದೊಡ್ಡ ಯೋಗಿಯಾಗಲೀ, ಎಷ್ಟು ದೊಡ್ಡ ವಿದ್ವಾಂಸನಾಗಲೀ, ತಿಳುವಳಿಕೆ ಸೀಮಿತವಾದುದ್ದಾಗಿರುತ್ತದೆ.
ದೇವರನ್ನು ನೋಡಲಾಗದು, ಅನುಭವಿಸಬೇಕು
     ನಾನು ಇಂತಹ ಮನೆಯಲ್ಲಿ ಹುಟ್ಟಬೇಕು ಎಂದು ಭಗವಂತನನ್ನು ನಾನು ಕೇಳ್ಕೊಳ್ಳಲಿಲ್ಲ. ಮನುಷ್ಯನಾಗಿ ಹುಟ್ಟಲು ಯೋಗ್ಯ ಅಂತ ನನಗೆ ಮನುಷ್ಯ ಜನ್ಮ ಕೊಟ್ಟ. ಇದನ್ನು ಯಾಕೆ ಹೇಳ್ತಾ ಇದೀನಿ ಅಂದ್ರೆ, ಪರಮಾತ್ಮ, ಪರಿಪೂರ್ಣ, ವಿಶ್ವವ್ಯಾಪಕ, ಈ ಜೀವಾತ್ಮ ಪರಿಚ್ಛಿನ್ನ. ಕೇವಲ ಒಂದು ಜಾಗದಲ್ಲಿ ಇರತಕ್ಕವನು. ಅದೂ ಕೂಡ ಎಷ್ಟು? ಜೀವಾತ್ಮನ ವಿಸ್ತಾರ, ಉದ್ದ, ಅಗಲ, ಎಷ್ಟಿದೆ ಗೊತ್ತಾ? 'ಬಾಲಾಗ್ರ . . . ' . . ದೇವರೇ! ಲೆಕ್ಕದಲ್ಲಿ ನನ್ನ ತಲೆ ಹಾಗೆ ಹಾಗೆಯೇ. ಇಲ್ಲಿ ಲೆಕ್ಕ ಮಾಡಬೇಕೆಂದರೆ, ಬಾಲಾಗ್ರದ ಶತಭಾಗ, ಒಂದು ಕೂದಲಿನ ತುದಿಯ 100ನೆಯ ಒಂದು ಭಾಗ, ಕೂದಲನ್ನು ಉದ್ದುದ್ದ ಸೀಳಬೇಕು, ಅಡ್ಡಡ್ಡಲಾಗಿ ಅಲ್ಲ, ಅದನ್ನು ಮತ್ತೆ ಸೀಳಿ 100ನೆಯ ಒಂದು ಭಾಗ ತೆಗೆಯಬೇಕು. ಹೀಗೆ ಆರು ಸಲ ಸೀಳಬೇಕು. ಕೊನೆಗೆ ಎಷ್ಟು ಸೂಕ್ಷ್ಮವಾಗಿ ಆ ಕೂದಲು ಉಳಿದುಕೊಳ್ಳುತ್ತದೋ ಅಷ್ಟು ಸೂಕ್ಷ್ಮ ಈ ಜೀವಾತ್ಮ. ಆಮೇಲೆಯೇ ಅವನನ್ನು ನೋಡುವುದಕ್ಕೆ ಆಗುವುದು. ಒಬ್ಬ ಶಿಷ್ಯ ಗುರುವನ್ನು ಕೇಳ್ತಾನೆ, 'ಅದ್ಯಾಕೆ ಅಷ್ಟು ಸೂಕ್ಷ್ಮವಾದ ಅವನನ್ನು ಹುಡುಕಿಕೊಂಡು ಹೋಗಬೇಕು? ಅವನ ಪಾಡಿಗೆ ಅವನಿರಲಿ ಸೂಕ್ಷ್ಮವಾಗಿ, ನಮ್ಮ ಪಾಡಿಗೆ ನಾವು ಇರೋಣ.' ಪರಮಾತ್ಮ ಜ್ಞಾನವಿಲ್ಲದೆ ಯಾವ ಜ್ಞಾನವೂ ಸಿಕ್ಕುವುದಿಲ್ಲ. ಈ ಪ್ರಪಂಚದ ಜ್ಞಾನ ಅಂದರೆ - ಸೈಂಟಿಸ್ಟ್‌ಗಳನ್ನು ಕೇಳಿ-  ಎಷ್ಟು ನಕ್ಷತ್ರಗಳಿವೆ ಅಂತ. ಯಾರಿಗೂ ಉತ್ತರ ಹೇಳಕ್ಕಾಗಲ್ಲ. ಗ್ರಹಗಳು, ಹೇಳಿಬಿಡ್ತಾರೆ, ಸೋಮ, ಮಂಗಳ, ಬುಧ, .  ಅಂತ. ಈ ನವಗ್ರಹಗಳೂ ಕೂಡ ಪೌರಾಣಿಕರು ಮಾಡಿರೋದು. ಚಂದ್ರ ಗ್ರಹ ಅಲ್ಲ, ಉಪಗ್ರಹ. ಚಂದ್ರನಿಗೂ ಪೂರ್ಣಗ್ರಹದಂತೇ ಲೆಕ್ಕ ಹಾಕುತ್ತಾರೆ. ಸೂರ್ಯ ಒಂದು ನಕ್ಷತ್ರ. ಎಲ್ಲಾ ಯೋಚನೆ ಮಾಡಿದರೆ, ನೀವು ಎಷ್ಟು ಯೋಚನೆ ಮಾಡಿ, 'ತ್ವಂ ಸಂಪ್ರಶ್ನಂ ಭುವನಾಯ . . .'  ಪ್ರಶ್ನೆ ಕೇಳುತ್ತಾ ಹೋಗಿ, ಕೊನೆಗೆ ಕೇಳಬೇಕಾದ್ದು ಇನ್ನೂ ಪ್ರಶ್ನೆ ಇರುತ್ತೆ.  ಕೇಳುತ್ತಾ ಕೇಳುತ್ತಾ ನೀನು ಮೌನಿ ಆಗುತ್ತೀಯಲ್ಲಾ, ಸಾಕಾಯ್ತಪ್ಪಾ, ಗಂಟಲು ಒಣಗಿ ಹೋಯಿತು, ಇನ್ನು ಮಾತಾಡಕ್ಕೆ ಆಗಲ್ಲ, ಅಂತ ಸ್ಥಿತಿ ಬಂದಾಗ ಉಂಟಾಗುವ ಮೌನ, ಆ ಮೌನವೂ ಕೂಡ ಒಂದು ವಾಣೀನೇ, ಮೌನವಾಣಿ. ಅದೂ ಭಗವಂತನನ್ನೇ ತೋರಿಸುತ್ತೆ. ತಮಾಷೆ, ಇನ್ನೊಬ್ಬ ಶಿಷ್ಯ ಕೇಳ್ತಾನೆ, "ಸ್ವಾಮಿ, ಅವನು ಸರ್ವವ್ಯಾಪಕ, ನಾವು ಒಂದು ಕಡೆ ಇರತಕ್ಕವರು, ನಾವು ಹೆಚ್ಚು ಅಂದರೆ ನಮ್ಮ ಕಣ್ಣು ಎಷ್ಟು ದೂರ ಹೋಗಬಹುದು, ಅಷ್ಟು ಕಾಣಬಹುದು, ಅದರ ಆಚೆ ಪ್ರಪಂಚ ಇಲ್ಲವಾ?' ಪ್ರಪಂಚ ಇದೆ, ದೇವರೂ ಇದ್ದಾನೆ. ಹಿಮಾಲಯ ನೋಡಿದಿಯಾ ಅಂದರೆ 'ನೋಡಿದೀನಿ' ಅಂತ ಹೇಳ್ತೀವಿ. ಅದು ಡಾರ್ಜಿಲಿಂಗಿನಿಂದ ಹಿಡಿದು ಹಿಂದೂಖುಷ್ ಪರ್ವತದವರೆಗೆ 2500 ಮೈಲಿಗಳವರೆಗೆ ಹರಡಿಕೊಂಡಿದೆ. ನಾನು ಹಿಮಾಲಯ ಪರ್ವತ ನೋಡಿದೆ ಅಂದಾಗ, ಸುಳ್ಳು ಹೇಳ್ತಾ ಇಲ್ಲ, ನೋಡಿದೆ, ಅಂದರೆ ಮಾತು ತಪ್ಪು, ಅಂದರೆ ಹಿಮಾಲಯವನ್ನು ನೋಡಲಿಲ್ಲ, ಹಿಮಾಲಯದ ಒಂದು ಭಾಗವನ್ನು ನೋಡಿದೆ ಅನ್ನಬೇಕು. ಯಾರು ಇಷ್ಟೊಂದೆಲ್ಲಾ ದಾರ್ಶನಿಕವಾಗಿ ಯೋಚನೆ ಮಾಡ್ತಾರೆ?
     ಮತ್ತೆ ಒಬ್ಬ ಗುರುವನ್ನು ಶಿಷ್ಯ ಕೇಳ್ತಾನೆ, 'ಪ್ರಪಂಚದಲ್ಲಿ ಇಷ್ಟೆಲ್ಲಾ ವ್ಯಾಪಿಸಿಕೊಂಡಿದಾನೆ, ಭಗವಂತ, ಆ ಪೂರ್ಣ ಭಗವಂತನನ್ನು ತಿಳಿಯಲು ಸಾಧ್ಯವಾ? ನೀವು ಇಷ್ಟೇ ಇದೀರಿ? ಒಂದು ಕಡೆ ಇರುವವರು'. ಆಗ ಗುರು ಹೇಳ್ತಾನೆ, 'ನೀನು ಒಂದು ಗ್ಲಾಸು ಶರಬತ್ತು ಮಾಡ್ತೀಯ. ನೀನು ಶರಬತ್ತು ಮಾಡಲು ನೀರು ಎಷ್ಟು ಹಾಕ್ತೀಯೋ, ನಿಂಬೆಹುಳಿ ಎಷ್ಟು ಹಾಕ್ತೀಯೋ ಅಷ್ಟೇ ಸಕ್ಕರೆ ಹಾಕ್ತೀಯಾ? ಇಲ್ಲ. ಸಕ್ಕರೆ ಹಾಕೋದು ಸ್ವಲ್ಪವೇ. ಆದರೆ ಶರಬತ್ತಿನ ಯಾವುದೇ ಭಾಗವನ್ನು ತೆಗೆದುಕೊಂಡು ನೀವು ರುಚಿ ನೋಡಿದರೆ ನಿಮಗೆ ಸಿಹಿ ಗೊತ್ತಾಗುತ್ತೆ.' 'ಇಲ್ಲ ನನಗೆ ಉಪ್ಪಿನ ರುಚಿ ಬಂತು' ಅಂತ ಹೇಳಿದರೆ ಅವನು ಮೋಸಗಾರ. ಇದನ್ನು ತತ್ವಶಃ ನಾವು ತಿಳಿಯಬೇಕು. ಒಂದು ತೊಟ್ಟು ಶರಬತ್ತನ್ನು ನಾಲಿಗೆಯ ಮೇಲೆ ಹಾಕಿಕೊಂಡು ರುಚಿ ನೋಡಿ ಅದು ಸಿಹಿ ಅಂತ ನಾನು ಹೇಳುತ್ತೇನೆ. ನನ್ನನ್ನು ಸುಳ್ಳ ಅಂತೀರಾ?' ಇಲ್ಲ. ಅದೇ ರೀತಿ ಭಗವಂತನನ್ನು - ಸಾಗರ ರೂಪ ಅಂತಾ ಕೂಡಾ ಹೇಳ್ತಾರೆ - ಅನುಭವಿಸಿ ತಿಳಿಯಬೇಕೇ ಹೊರತು ನೋಡಲಾಗದು. ಒಂದು ಪೂರ್ಣ ಜಗತ್ತನ್ನೇ ಮೊದಲು ನೋಡಿ, ಜಗತ್ತು ಅಂದರೆ ಈ ಭೂಮಿ ಒಂದೇ ಅಲ್ಲ, ಸೂರ್ಯ, ಚಂದ್ರ, ಎಲ್ಲಾ ಗ್ರಹಗಳು, ಲೆಕ್ಕವಿಲ್ಲದಷ್ಟು ನಕ್ಷತ್ರಗಳು, ಇವೆಲ್ಲಾ ಒಟ್ಟಿಗೆ ಸೇರಿ ಬ್ರಹ್ಮಾಂಡ ಅಂತಾರೆ. ಹಾಗಾದರೆ ಆ ಬ್ರಹ್ಮಾಂಡವನ್ನು ತಿಳಿಯಲು ಸಾಧ್ಯವೇ? ಭೌತಿಕ ಬ್ರಹ್ಮಾಂಡವನ್ನಂತೂ ತಿಳಿದುಕೊಳ್ಳಲು ಸಾಧ್ಯವೇ ಇಲ್ಲ. ವಿಜ್ಞಾನಿಗಳು ಎಷ್ಟು ಎಷ್ಟು ಅನ್ವೇಷಣೆ ಮಾಡ್ತಾ ಇದಾರೋ ಅಷ್ಟಷ್ಟು ಬೇರೆ ಬೇರೆ ನಕ್ಷತ್ರಗಳು, ಗ್ರಹಗಳು ಕಾಣಿಸುತ್ತಾ ಇರುತ್ತವೆ. ಪ್ರತಿಯೊಂದು ಶುಭಕಾರ್ಯ ಮಾಡಬೇಕಾದರೂ ಕೂಡ ಮೊದಲು ನವಗ್ರಹಗಳಿಗೆ ದಾನ ಕೊಡಬೇಕು ಅಂತಾರೆ. ಪಾಪ, ಆ ನವಗ್ರಹಗಳಿಗೆ ಏನು ಬೇಕಾಗಿದೆ? ಪೂಜೆ ಮಾಡಿದ ಮೇಲೆ ಆ ದಾನಗಳನ್ನು ಗ್ರಹಗಳು ಬಂದು ತೆಗೆದುಕೊಂಡು ಹೋಗೋದಿಲ್ಲ.
     ನಾನು ಹೇಳ್ತಾ ಇದ್ದೆ, ಯಾವ ರೀತಿ ಆ ಶರಬತ್ತಿನ ಒಂದು ತೊಟ್ಟನ್ನು ನಾಲಿಗೆ ಮೇಲೆ ಹಾಕಿಕೊಂಡರೆ ಆ ಪೂರ್ತಿ ಶರಬತ್ತಿನ ರುಚಿ ಗೊತ್ತಾಗುತ್ತೋ ಹಾಗೇನೇ ಭಗವಂತ  ನಮ್ಮ ಹೃದಯದಲ್ಲಿ ಇರ್ತಾನೆ, ಅಲ್ಲಿ ಜೀವಾತ್ಮನೂ ಇರ್ತಾನೆ, ಇಬ್ಬರೂ ಇರ್ತಾರೆ, ಆದರೆ ಇಬ್ಬರೂ ಸೂಕ್ಷ್ಮ. ಪರಮಾತ್ಮನನ್ನು ಸಚ್ಚಿದಾನಂದ ಸ್ವರೂಪ ಅಂತೀವಿ, ಒಂದು ಮೆಟ್ಟಲು ಕೆಳಗೆ ಇಳೀತೀವಿ, ಸತ್ ಚಿತ್ ಸ್ವರೂಪ ಜೀವ ಅಂತ, ಆನಂದಕ್ಕೆ ಖೋತಾ, ಆನಂದ ಇಲ್ಲ. ಪ್ರಕೃತಿ ಹತ್ತಿರ ಬಂದರೆ ಚೈತನ್ಯ ಕೂಡಾ ಇಲ್ಲ. ಬರೀ ಪರಮಾಣು ಜಡ ಸಮೂಹ. ಅದು ಇನ್ನೂ ಕೆಳಗೆ ಹೋಯಿತು. ಆದ್ದರಿಂದ ಋಷಿಮುನಿಗಳು ಹೇಳ್ತಾರೆ, 'ನಿನಗಿಂತ ಮೇಲಿರುವ ಪರಮಾತ್ಮ ಆನಂದಮಯ, ಅವನನ್ನು ಕುರಿತು ಧ್ಯಾನ ಮಾಡು, ಈ ಜಡ ಪ್ರಕೃತಿಯನ್ನು ಧ್ಯಾನ ಮಾಡಿದರೆ ಪ್ರಯೋಜನವಿಲ್ಲ.' ನನ್ನನ್ನು ಮೂರ್ತಿಪೂಜಕರು ಕೇಳುವುದು ಇದೇ ಪ್ರಶ್ನೆ, 'ಪಂಡಿತಜಿ, ಏನೂ ಇಲ್ಲದೆ ಹೋದರೆ ಮನಸ್ಸನ್ನು ಎಲ್ಲಿ ನಿಲ್ಲಿಸುವುದು? ಒಂದು ಬೇಕು, ಕಲ್ಲಿಂದೋ, ಮಣ್ಣಿಂದೋ, ಕಟ್ಟಿಗೆಯದೋ, ಯಾವುದಾದರೂ ಒಂದು ಪ್ರತೀಕ ಬೇಕು, ಅದರಲ್ಲಿ ಮನಸ್ಸನ್ನು ನಿಲ್ಲಿಸಬಹುದು.' ನಾನು ಕೇಳೋದು, 'ನೀವು ಯಾರಲ್ಲಿ ಮನಸ್ಸನ್ನು ನಿಲ್ಲಿಸಬೇಕು ಅಂತಿದೀರಿ?' 'ಪರಮಾತ್ಮನಲ್ಲಿ'. ಪರಮಾತ್ಮ ಅದರೊಳಗೆ ಇದಾನೆ ಅನ್ನೋದೇನೋ ನಿಜ, ಅದೇ ಪರಮಾತ್ಮನಾ? ತಾತ್ಪರ್ಯ ಏನು? ಸೂಕ್ಷ್ಮತಮ ತತ್ವ ಇದೆಯಲ್ಲಾ, ಅದು ಜ್ಞಾನದ ಕಣ್ಣಿಗೆ ಕಾಣುತ್ತೆಯೇ ಹೊರತು, ಈ ಕಣ್ಣಿಗೆ ಏನೂ ಕಾಣೋದಿಲ್ಲ.
-ಕ.ವೆಂ. ನಾಗರಾಜ್.
***************
ದಿನಾಂಕ  -8-2015ರ ಜನಹಿತ ಪತ್ರಿಕೆಯ ಜನಕಲ್ಯಾಣ ಅಂಕಣದಲ್ಲಿ ಪ್ರಕಟಿತ:

3 ಕಾಮೆಂಟ್‌ಗಳು: