ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಮಂಗಳವಾರ, ಡಿಸೆಂಬರ್ 16, 2014

ಬೇಡದಿರು ಮನವೆ ಬೇಡದಿಹ ಸಾವ!


ಇತ್ತಿಹನು ಭಗವಂತ ಬದುಕಲೀ ಬದುಕು
ಬದುಕುವ ಮುನ್ನ ಸಾಯುವುದೆ ಕೆಡುಕು |
ಸಾಯುವುದು ಸುಲಭ ಬದುಕುವುದು ಕಷ್ಟ
ಸುಲಭದ ಸಾವ ಬಯಸದಿರು ಮೂಢ ||
     ಒಂದು ಲೇಖನದಲ್ಲಿ ಪ್ರಾಸಂಗಿಕವಾಗಿ ನನಗೆ ಆತ್ಮಹತ್ಯೆ ಮಾಡಿಕೊಳ್ಳುವ ವಿಚಾರ ಬಂದಿದ್ದ ಸಂದಿಗ್ಧ ಸಂದರ್ಭದಲ್ಲಿ ಪರಿಹಾರಕ್ಕಾಗಿ ಧ್ಯಾನದ ಮೊರೆ ಹೋಗಿ ಸಾಂತ್ವನ ಕಂಡುಕೊಂಡ ಬಗ್ಗೆ ಬರೆದಿದ್ದೆ. ಅದಕ್ಕೆ ಪ್ರತಿಕ್ರಿಯೆಯಾಗಿ ಮಿತ್ರರೊಬ್ಬರು "ಅಂತಹ ಸಂದರ್ಭದಲ್ಲಿ ಧ್ಯಾನದ ಅಗತ್ಯವೇ ಇಲ್ಲ, ಬೇರೆ ವಿಷಯದ ಎಡೆಗೆ ಆಸಕ್ತರಾದಾಗ ಆತ್ಮಹತ್ಯೆ ಯೋಚನೆ ತನ್ನಿಂದ ತಾನೇ ದೂರವಾಗುತ್ತದೆ" ಎಂದಿದ್ದರು. ಆ ಮಿತ್ರರ ಪ್ರತಿಕ್ರಿಯೆ ನನ್ನ ಈ ಲೇಖನಕ್ಕೆ ಪ್ರೇರಣೆಯಾಗಿದೆ. ನೀರಿನಲ್ಲಿ ಮುಳುಗುತ್ತಿರುವ ಈಜು ಬಾರದ ವ್ಯಕ್ತಿಯೊಬ್ಬ ಬದುಕಿ ಉಳಿಯಲು ತನ್ನ ಕೈಲಾದ ಎಲ್ಲಾ ಪ್ರಯತ್ನ ಮಾಡುತ್ತಾನೆ, ಕೈಗೆ ಸಿಕ್ಕುವ ಎಂತಹದನ್ನಾದರೂ ಹಿಡಿದು ಮೇಲೆ ಬರಲು ಪ್ರಯತ್ನಿಸುತ್ತಾನೆ. ಸಹಾಯಕ್ಕಾಗಿ ಆರ್ತನಾದ ಮಾಡುತ್ತಾನೆ. ಯಾವುದೇ ಸಹಾಯ ಸಿಗದಿದ್ದಾಗ ಅನಿವಾರ್ಯವಾಗಿ ಸಾವಿಗೆ ಶರಣಾಗುತ್ತಾನೆ. ಆತ್ಮಹತ್ಯೆ ಮಾಡಿಕೊಳ್ಳುವವನ ಸ್ಥಿತಿ ಸಹ ಒಂದು ರೀತಿಯಲ್ಲಿ ಹಾಗೆಯೇ ಇರುತ್ತದೆ. ಸಮಸ್ಯೆಯ ಸುಳಿಯಿಂದ ಪಾರಾಗಲು ಇನ್ನಿಲ್ಲದ ಪ್ರಯತ್ನ ಮಾಡುವ ಅವನಿಗೆ ಸಹಾಯದ ಎಲ್ಲಾ ದಾರಿಗಳೂ ಮುಚ್ಚಲ್ಪಟ್ಟಾಗ ಉಳಿಯುವುದು ದೇವರ ಮೊರೆ ಹೋಗುವುದು ಅರ್ಥಾತ್ ಧ್ಯಾನಿಸುವುದು ಮತ್ತು ಅವ್ಯಕ್ತ ಸಹಾಯಕ್ಕಾಗಿ ಹಂಬಲಿಸುವುದು ಮಾತ್ರ. ಅಲ್ಲೂ ಅವನಿಗೆ ನಿರಾಶೆಯಾದರೆ . . . .? ಅಂತಹ ಸಂದರ್ಭಗಳಲ್ಲಿ ಮನಸ್ಸು ಬೇರೆ ವಿಚಾರಗಳ ಕುರಿತು ಯೋಚಿಸುವ ವ್ಯವಧಾನ ಕಳೆದುಕೊಂಡಿರುತ್ತದೆ. ಅವನ ಪರಿಸ್ಥಿತಿಯ ಅರಿವಿರುವ ಸ್ನೇಹಿತರು, ಬಂಧುಗಳು ದೇವರ ರೂಪದಲ್ಲಿ ಅವನಿಗೆ ಸಹಾಯಕ್ಕೆ ಒದಗಿದರೆ ಮಾತ್ರ ಅವನನ್ನು ಉಳಿಸಬಹುದು. 
     ಆತ್ಮಹತ್ಯೆ, ಅರ್ಥಾತ್ ತನ್ನನ್ನು ತಾನೇ ಕೊನೆಗೊಳಿಸಿಕೊಳ್ಳುವುದು, ಒಂದು ಹತಾಶೆಯ ನಡವಳಿಕೆ. ಖಿನ್ನತೆ, ಮಾನಸಿಕ ಕಾಯಿಲೆಗಳು, ದೈಹಿಕ ಅನಾರೋಗ್ಯ, ಮಾದಕ ದ್ರವ್ಯಗಳ ಸೇವನೆ, ಒತ್ತಡಗಳು, ಆರ್ಥಿಕ ಹಿನ್ನಡೆ, ಧಾರ್ಮಿಕ/ಸಾಮಾಜಿಕ ಸಂಗತಿಗಳು, ವಿಫಲತೆ, ಅವಮಾನ ಮುಂತಾದವು ಆತ್ಮಹತ್ಯೆಯನ್ನು ಪ್ರೇರಿಸುವಂತಹವು. ನೇಣು ಹಾಕಿಕೊಳ್ಳುವುದು, ವಿಷ ಸೇವನೆ, ನೀರಿನಲ್ಲಿ ಮುಳುಗುವುದು, ಇತ್ಯಾದಿಗಳು ಆತ್ಮಹತ್ಯೆ ಮಾಡಿಕೊಳ್ಳುವವರು ಆರಿಸಿಕೊಳ್ಳುವ ರೀತಿಗಳು. ಆತ್ಮಹತ್ಯೆ ಮಾಡಕೊಳ್ಳುವವರಲ್ಲಿ ಹೆಚ್ಚಿನವರು ಮಧ್ಯ ವಯಸ್ಕರು ಮತ್ತು ವೃದ್ಧರು ಎಂದು ಅಂಕಿ-ಅಂಶಗಳು ಹೇಳುತ್ತವೆ. ಅವರುಗಳಲ್ಲಿ ಹೆಂಗಸರಿಗಿಂತ ಗಂಡಸರ ಸಂಖ್ಯೆಯೇ ಅಧಿಕವಾಗಿರುವುದು ಕುತೂಹಲಕಾರಿಯಾಗಿದೆ. ಅಂತರ್ಜಾಲದಲ್ಲಿ ತಡಕಾಡಿದರೆ ಹಲವಾರು ರೋಚಕ ವಿಷಯಗಳು ತಿಳಿಯುತ್ತವೆ. ಕೆಲವು ಕುತೂಹಲಕಾರಿ ವಿಷಯಗಳನ್ನು ಪ್ರಾಸಂಗಿಕವಾಗಿ ತಿಳಿಸಿ ಲೇಖನದ ಮುಖ್ಯ ಉದ್ದೇಶಕ್ಕೆ ಬರುವೆ. ಪ್ರಪಂಚದಲ್ಲಿ ಅತಿ ಹೆಚ್ಚು ಆತ್ಮಹತ್ಯೆ ಮಾಡಿಕೊಳ್ಳುವವರು ಚೀನೀಯರು. ವರ್ಷದಲ್ಲಿ ಸುಮಾರು ೨.೫ ಲಕ್ಷದಿಂದ ೩ ಲಕ್ಷ ಜನರು ಅಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರಂತೆ.  ಸಿಗ್ಮಂಡ್ ಫ್ರಾಯ್ಡ್, ಕ್ಲಿಯೋಪಾತ್ರ, ಮಾರ್ಕ್ ಅಂಟೊನಿ, ಬ್ರೂಟಸ್, ಅಡಾಲ್ಫ್ ಹಿಟ್ಲರ್, ಅರ್ನೆಸ್ಟ್ ಹೆಮಿಂಗ್ ವೇ, ಮರ್ಲಿನ್ ಮನ್ರೋ, ಮುಂತಾದ ಖ್ಯಾತನಾಮರು ತಮ್ಮ ಜೀವನ ಕೊನೆಗೊಳಿಸಿಕೊಂಡದ್ದು ಆತ್ಮಹತ್ಯೆಯಿಂದಲೇ. ಕನ್ನಡದ ಚಲನಚಿತ್ರ ನಟಿಯರಾದ ಕಲ್ಪನಾ, ಮಂಜುಳಾರವರ ಅಂತ್ಯವೂ ಆತ್ಮಹತ್ಯೆಯಿಂದಲೇ ಆದದ್ದು. ಹಿಂದೆ ಶತ್ರುಗಳಿಂದ ಬಂಧನಕ್ಕೊಳಗಾಗಿ ಚಿತ್ರಹಿಂಸೆ ಅನುಭವಿಸುವುದಕ್ಕಿಂತ ಸಾಯುವುದೆ ಮೇಲು ಎಂದುಕೊಂಡು ಆತ್ಮಹತ್ಯೆಗೆ ಶರಣಾಗುತ್ತಿದ್ದವರೂ ಇದ್ದರು. ಮುಸ್ಲಿಮ್ ದಾಳಿಕೋರರಿಂದ ಅವಮಾನಿತರಾಗುವುದನ್ನು ತಪ್ಪಿಸಿಕೊಳ್ಳಲು ರಜಪೂತ ಸ್ತ್ರೀಯರು ಸ್ವತಃ ಚಿತೆಗೆ ಹಾರಿ (ಅದನ್ನು ಜೌಹರ್ ಎನ್ನುತ್ತಿದ್ದರು) ಪ್ರಾಣ ಬಿಟ್ಟ ಬಗ್ಗೆ ಇತಿಹಾಸದ ಪುಟಗಳಲ್ಲಿ ದಾಖಲೆಗಳಿವೆ. ಗಂಡ ಸತ್ತಾಗ ಹೆಂಡತಿಯೂ ಚಿತೆಯೇರಿ ಸಹಗಮನ ಮಾಡುತ್ತಿದ್ದುದೂ ಹಿಂದೆ ಪ್ರಚಲಿತವಿತ್ತು. ಮೆಚ್ಚಿನ ನಾಯಕರುಗಳು ನಿಧನರಾದಾಗ ಶೋಕ ತಡೆಯಲಾರದೆ ಹಲವಾರು ಜನ ಪ್ರಾಣ ಕಳೆದುಕೊಂಡದ್ದೂ ಇದೆ. ಇತ್ತೀಚೆಗೆ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಬಂಧನದಿಂದ ಕಂಗೆಟ್ಟ ೨೪ಕ್ಕಿಂತಲೂ ಹೆಚ್ಚು ಜನರು ಆತ್ಮಹತ್ಯೆ ಮಾಡಿಕೊಂಡ ವಿಷಯ ಹಸಿರಾಗಿದೆ. ಸಮೂಹ ಸನ್ನಿಯ ಅತಿರೇಕವಿದು. ಸೆಪ್ಟೆಂಬರ್ ೧೦ನೆಯ ದಿನವನ್ನು ಪ್ರಪಂಚದ ಆತ್ಮಹತ್ಯೆ ತಡೆಯುವ ದಿನವಾಗಿ ಆಚರಿಸಲಾಗುತ್ತಿದೆ. ಇರಲಿ, ಆತ್ಮಹತ್ಯೆ ಹೇಗೆ ಮಾಡಿಕೊಳ್ಳುತ್ತಾರೆ, ಇತ್ಯಾದಿ ವಿವರಗಳನ್ನು ಇಲ್ಲಿ ವಿವರವಾಗಿ ಚರ್ಚಿಸುವುದು ಸೂಕ್ತವಲ್ಲ. ಆತ್ಮಹತ್ಯೆಯ ವಿವರಗಳನ್ನು ದೃಷ್ಯ ಮಾಧ್ಯಮಗಳಲ್ಲಿ ಪದೇ ಪದೇ ಬಿತ್ತರಿಸಿ, ವೈಭವೀಕರಿಸಿ, ರೋಚಕವಾಗಿ ಪ್ರಸ್ತಾಪಿಸುವುದರಿಂದ ಋಣಾತ್ಮಕ ಪರಿಣಾಮ ಬೀರುವುದನ್ನು ಗಮನಿಸಬೇಕಿದೆ. 
     ಆತ್ಮಹತ್ಯೆ ಅನ್ನುವುದು ಬಯಸಿ ಮಾಡಿಕೊಳ್ಳುವ ಸಂಗತಿಯಲ್ಲ; ಅದು ನೋವನ್ನು ಉಪಶಮನಗೊಳಿಸುವ ಎಲ್ಲಾ ಮಾರ್ಗಗಳೂ ವಿಫಲವಾಗಿ ನೋವು ಅಸಹನೀಯವೆನಿಸಿದಾಗ ನಡೆಯುವ ಸಂಗತಿ. ಇದನ್ನು ನಡೆಯದಂತೆ ಮಾಡುವುದು ಹೇಗೆ? ಎರಡು ಅವಕಾಶಗಳಿವೆ: ಒಂದು- ನೋವನ್ನು ಕಡಿಮೆ ಮಾಡಿಕೊಳ್ಳಲು ದಾರಿ ಹುಡುಕುವುದು; ಎರಡು: ನೋವು ಕಡಿಮೆ ಮಾಡಬಹುದಾದ ಹೊಸ ಮಾರ್ಗೋಪಾಯಗಳನ್ನು ಅರಸುವುದು. ನಿಜವಾಗಿ ಯಾರೂ ಸಾಯಬಯಸುವುದಿಲ್ಲ. ಆತ್ಮಹತ್ಯೆ ಮಾಡಿಕೊಂಡವರಿಗೆ ಮರಳಿ ಜೀವ ಬರಿಸಿ, ಅವರು ಸಾಯಬಯಸುತ್ತಾರೋ ಅಥವ ಬದುಕಬಯಸುತ್ತಾರೋ ಎಂದು ಕೇಳಿದರೆ ಅವರುಗಳು ಬದುಕುವುದನ್ನೇ ಆರಿಸಿಕೊಳ್ಳುತ್ತಾರೆ. ಏಕೆಂದರೆ ದುಡುಕಿನ ವಿಷಘಳಿಗೆ ಅದಾಗಲೇ ಕಳೆದುಹೋಗಿರುತ್ತದೆ. ಉತ್ಕಟ ಸನ್ನಿವೇಶದಲ್ಲಿ ದುಡುಕಿ ಕೈಗೊಳ್ಳುವ ಆತ್ಮಹತ್ಯೆಯತ್ನದಲ್ಲಿ ತಕ್ಷಣಕ್ಕೆ ಸಾವು ಸಂಭವಿಸದೇ ಇದ್ದಾಗ ಜೀವ ಮರಳಿ ಬದುಕಲು ಚಡಪಡಿಸುತ್ತಿರುತ್ತದೆ. ಕೆಲವು ಪ್ರಸಂಗಗಳಲ್ಲಿ ಆತ್ಮಹತ್ಯೆಗೆ ಯತ್ನಿಸಿ ಸಾಯದೇ ಬದುಕುಳಿದವರು ಜೀವಚ್ಛವಗಳಂತೆ ಆಗಿ ಇನ್ನೊಬ್ಬರ ಆಶ್ರಯದಲ್ಲಿ ಇರಬೇಕಾಗಿ ಬಂದುದನ್ನೂ ಕಂಡಿದ್ದೇವೆ. ಕೆಲವು ದಶಕಗಳ ಹಿಂದೆ ಆತ್ಮಹತ್ಯೆ ಮಾಡಿಕೊಳ್ಳಲು ವಿಷ ಸೇವಿಸಿದ್ದ ಒಬ್ಬರು ಕತೆಗಾರ್ತಿ, ಅವರ ಹೆಸರು ಗಂಗಾಪಾದೇಕಲ್ ಇರಬಹುದು, ತಾವೇ ತಮ್ಮ ಅನುಭವವನ್ನು ಹೇಳಿಕೊಂಡಿದ್ದನ್ನು ಓದಿದ್ದೆ. ಅವರು ಯಾವ ಕಾರಣಕ್ಕೋ ಬೇಸರಗೊಂಡು ಮನೆಯ ಅಟ್ಟದ ಮೇಲಿನ ಕೊಠಡಿಯ ಬಾಗಿಲು ಹಾಕಿಕೊಂಡು ವಿಷಸೇವನೆ ಮಾಡಿದ್ದರು. ನಂತರ ಸಂಕಟದಿಂದ ಒದ್ದಾಡುವಾಗ ಅವರಿಗೆ ಬದುಕುವ ಇಚ್ಛೆ ಪ್ರಬಲವಾಗಿ ಮನೆಯವರನ್ನು ಕೂಗಿ ಕರೆಯಲು ನೋಡಿದರೆ ಸ್ವರವೇ ಹೊರಡದೆ ಕೂಗಲಾಗಿರಲಿಲ್ಲ. ಎದ್ದು ಕೊಠಡಿಯ ಬಾಗಿಲು ತೆರೆಯುವ ಶಕ್ತಿಯೂ ಉಡುಗಿಹೋಗಿ ತೇಲುಗಣ್ಣು ಮಾಡುತ್ತಿದ್ದರು. ಅಕಸ್ಮಾತ್ತಾಗಿ ಅವರ ತಾಯಿ ಮಗಳನ್ನು ಕರೆದರೂ ಉತ್ತರ ಬರದಿದ್ದರಿಂದ ಅಟ್ಟ ಹತ್ತಿ ನೋಡಿದರೆ ಬಾಗಿಲು ಹಾಕಿದ ಕೊಠಡಿಯ ಒಳಗಿಂದ ಗೊರಗೊರ ಶಬ್ದ ಬರುತ್ತಿದ್ದುದನ್ನು ಕಂಡು ಆತಂಕಿತರಾಗಿ ಇತರ ಸದಸ್ಯರ ಸಹಾಯದಿಂದ ಕೊಠಡಿಯ ಬಾಗಿಲು ಒಡೆದು ಮಗಳನ್ನು ಆಸ್ಪತ್ರೆಗೆ ಸೇರಿಸಿದ್ದರು. ದೇವರ ಕರುಣೆಯಿಂದ ಆಕೆ ಬದುಕಿ ಉಳಿದರು. ನಂತರದಲ್ಲಿ ಆಕೆ ಇತರರಿಗೆ ಆತ್ಮಹತ್ಯೆ ಮಾಡಿಕೊಳ್ಳದಿರಲು ಪ್ರೇರಣೆ ಕೊಡುವ ಲೇಖನ ಬರೆದಿದ್ದರು. ತಾಲ್ಲೂಕು ದಂಡಾಧಿಕಾರಿಯಾಗಿ ಸೇವೆ ಸಲ್ಲಿಸಿದ ಸಂದರ್ಭದಲ್ಲಿ ನೂರಾರು ಶವಗಳ ತನಿಖೆ ನಡೆಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದೆ. ಸಂಬಂಧಿಕರ ವಿಚಾರಣೆ, ಹೇಳಿಕೆಗಳನ್ನೂ ದಾಖಲಿಸಿದ್ದೆ. ಬಹುತೇಕ ಸಂದರ್ಭಗಳಲ್ಲಿ ಕಂಡುಬಂದಿದ್ದೇನೆಂದರೆ ಸಂಬಂಧಿಕರು ಸಕಾಲದಲ್ಲಿ ಮೃತರ ಸಹಾಯಕ್ಕೆ ಒದಗಿದ್ದಿದ್ದರೆ ಅವರುಗಳು ಬದುಕಿ ಉಳಿಯುವ ಅವಕಾಶಗಳಿದ್ದವು ಎಂಬುದು! 
ಬಯಸಿದರು ಸಾವೆ ಬಯಸದಿದ್ದರು ಸಾವೆ
ಬೇಡವೆಂದರೆ ನೀನು ಬರದಿಹುದೆ ಸಾವು |
ಬೇಡದಿರು ಮನವೆ ಬೇಡದಿಹ ಸಾವ
ಅಡ್ಡದಾರಿಯಲಿ ನುಗ್ಗದಿರು ಮೂಢ ||
     ಈ ಸಾವಿಗೆ ನಾಚಿಕೆಯಿಲ್ಲ; ಕರೆದರೂ ಬರುತ್ತದೆ, ಕರೆಯದಿದ್ದರೂ ಬರುತ್ತದೆ. ಹಾಗಿರುವಾಗ ಆ ನಿರ್ಲಜ್ಜ ಸಾವನ್ನು ಬಯಸಿ ಏಕೆ ಕರೆಯಬೇಕು? ಅದು ಬರುವವರೆಗೂ ಬದುಕಿರೋಣ. ಅದು ತಾನಾಗಿ ಬಂದಾಗ ಸಂತೋಷದಿಂದ ಹೋಗೋಣ. ನಗುತ್ತಾ ಸಾವನ್ನು ಅದು ಬರುವಾಗ ಮಿತ್ರನಂತೆ ಬರಮಾಡಿಕೊಳ್ಳೋಣ. ೮೪ ಲಕ್ಷ ವಿವಿಧ ಜೀವಿಗಳ ಪೈಕಿ ವಿರಳವಾದ ಮಾನವಜನ್ಮ ಹೊಂದುವುದು ಆ ಪರಮಾತ್ಮನ ಕರುಣೆಯಲ್ಲವೇ? ವೇದಗಳ ಪ್ರಕಾರ ಮತ್ತು ಭಾರತೀಯರ ನಂಬಿಕೆಯಂತೆ ಹುಟ್ಟು-ಸಾವುಗಳ ಚಕ್ರ ಸದಾ ತಿರುಗುತ್ತಿದ್ದು ಜೀವಿಗಳು ಹುಟ್ಟುತ್ತಾ, ಸಾಯುತ್ತಾ ಇದ್ದರೂ ಈ ಜೀವಿಗಳಿಗೆ ಚೈತನ್ಯದಾಯಕವಾದ ಆತ್ಮ ಮಾತ್ರ ಹುಟ್ಟುವುದೂ ಇಲ್ಲ, ಸಾಯುವುದೂ ಇಲ್ಲ; ಅದಕ್ಕೆ ಆದಿಯೂ ಇಲ್ಲ ಅಂತ್ಯವೂ ಇಲ್ಲ. ಆದರೆ, ಇಲ್ಲಿ ಒಂದು ವಿಶೇಷ ಅಂಶವಿದೆ. ಮುಂದೆ ಪಡೆಯುವ ಜನ್ಮ ಈ ಜನ್ಮದಲ್ಲಿ ಮಾಡಿದ ಕರ್ಮಗಳ ಸಂಚಿತಾರ್ಜಿತಫಲವೆಂದು ವೇದ ಸಾರಿದೆ. 
ನ ಕಿಲ್ಬಿಷಮತ್ರ ನಾಧಾರೋ ಅಸ್ತಿ ನ ಯನ್ಮಿತ್ರೈಃ ಸಮಮಮಾನ ಏತಿ |
ಅನೂನಂ ಪಾತ್ರಂ ನಿಹಿತಂ ನ ಏತತ್ಪಕ್ತಾರಂ ಪಕ್ವಃ ಪುನರಾವಿಶಾತಿ || (ಅಥರ್ವ.೧೨.೩.೪೮.)
     ಪರಮಾತ್ಮನ ನ್ಯಾಯವಿಧಾನದಲ್ಲಿ ಒಡಕಾಗಲೀ, ದೋಷವಾಗಲೀ ಇಲ್ಲ. ಅವನು ಜೀವಿಗಳಲ್ಲಿ ಇಟ್ಟಿರುವ ಗೂಢವಾದ ಅಂತಃಕರಣದ ಪಾತ್ರೆಯಲ್ಲಿ ಬೇಯಿಸಿದ ಅಡುಗೆಯನ್ನು (ಕರ್ಮಫಲವಿಪಾಕ) ತಯಾರು ಮಾಡಿದವರೇ ಉಣ್ಣಬೇಕಿದೆ. ಇತರರ ಸಹಾಯದಿಂದ, ಅಡ್ಡಮಾರ್ಗದಿಂದ ಇದನ್ನು ತಪ್ಪಿಸಿಕೊಳ್ಳಬಹುದೆಂಬ ಅವಕಾಶ ಇಲ್ಲಿಲ್ಲ ಎಂಬುದು ಇದರ ಅರ್ಥ. ಕರ್ಮಫಲಭೋಗ ಎಲ್ಲರಿಗೂ ಅನಿವಾರ್ಯ. ಹೀಗಿರುವಾಗ ಪುಣ್ಯವಶಾತ್ ಪಡೆದಿರುವ ಮಾನವ ಜನ್ಮವನ್ನು ಇರುವವರೆಗೂ ಸಾರ್ಥಕ ರೀತಿಯಲ್ಲಿ ಬಳಸಿಕೊಳ್ಳಬೇಕಿದೆ.
     ಸಾಯುವುದು ಸುಲಭ, ಬದುಕುವುದು ಕಷ್ಟ. ಸುಲಭವೆಂದು ಸಾಯಬೇಕೆ? ಕಷ್ಟವಾದರೂ ಬದುಕಬೇಕು. ಬದುಕಬೇಕೆಂಬ ಅದ್ಭುತ ಇಚ್ಛಾಶಕ್ತಿಗೆ ದುರ್ಯೋಧನನ ಉದಾಹರಣೆ ಕೊಡಬಹುದು. ಅವನ ಕಣ್ಣೆದುರಿಗೇ ಭೀಷ್ಮ, ದ್ರೋಣ ಮೊದಲಾದ ಅತಿರಥ, ಮಹಾರಥರು ಹೋದರು. ಕರ್ಣ ಹೋದ, ಸೋದರರು ಹೋದರು, ಆದರೆ ಅವನಿಗೆ ಇನ್ನೂ ವಿಶ್ವಾಸವಿತ್ತು. ಶಲ್ಯ ಇದ್ದಾನೆ, ತಾನೂ ಇದ್ದೇನೆ. ಯುದ್ಧದಲ್ಲಿ ಗೆಲ್ಲುತ್ತೇನೆ, ಬದುಕುತ್ತೇನೆ ಎಂಬ ವಿಶ್ವಾಸ ಅವನಿಗೆ ಸಾಯುವವರೆಗೂ ಇತ್ತು. ಅವನ ಆತ್ಮವಿಶ್ವಾಸ ಮೆಚ್ಚುವಂತಹದು. ಮನುಷ್ಯ ಕನಸು ಕಾಣುವುದನ್ನು ನಿಲ್ಲಿಸಿದಾಗ ಸಾಯತೊಡಗುತ್ತಾನೆ.  ಮಹರ್ಷಿ ದಯಾನಂದ ಸರಸ್ವತಿಯವರ ಶಿಷ್ಯರಾದ ಸ್ವಾಮಿ ಶ್ರದ್ಧಾನಂದರು ಹೇಳುತ್ತಿದ್ದಂತೆ, "ಆಶಾವಾದವೇ ಜೀವನ, ನಿರಾಶಾವಾದವೇ ಮರಣ". ಪರಮಾತ್ಮ ಯಾವ ಜೀವಿ ಎಷ್ಟು ಬದುಕಬೇಕು, ಎಷ್ಟು ಬಾಳಬೇಕು ಎಂಬುದನ್ನು ನಿರ್ಧರಿಸಿರುತ್ತಾನೆ. ಅದಕ್ಕೆ ಮೊದಲು ಆತ್ಮಹತ್ಯೆ ಮಾಡಿಕೊಂಡು ಸತ್ತರೆ ಅದು ಭಗವದಿಚ್ಛೆಗೆ ವಿರುದ್ಧ. ಸಾಯಲು ಬಯಸುವ ದುರಾಸೆ ಜೀವಿಯ ಇಚ್ಛಾಶಕ್ತಿಯನ್ನೇ ಹಾಳುಮಾಡುತ್ತದೆ.
     ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿಗೆ ತಲುಪಿದವರಲ್ಲಿ ಹಲವರು ಕೊನೆಯ ಬಾರಿಗೆ ತಮ್ಮ ಪ್ರೀತಿಪಾತ್ರರೊಂದಿಗೆ ಮಾತನಾಡಬಯಸುತ್ತಾರೆ, ಅವರುಗಳು ಸುಖವಾಗಿರಲೆಂದು ಹಾರೈಸುತ್ತಾರೆ. ಅಂತಹ ಹತ್ತಿರದವರು ಸೂಕ್ಷ್ಮಮತಿಗಳಾಗಿದ್ದರೆ ಅವರ ನೆರವಿಗೆ ಬರುತ್ತಾರೆ ಮತ್ತು ಜೀವಗಳು ಉಳಿಯುತ್ತದೆ. ಆತ್ಮಹತ್ಯೆ ಮಾಡಿಕೊಳ್ಳುವವರ ಬಗ್ಗೆ ತಿಳಿದರೆ ಅವರನ್ನು ಒಲಿಸಿ, ಓಲೈಸಿ ಮನ ಪರಿವರ್ತನೆ ಮಾಡಲು ಕೆಲವು ಸಮಾಜಸೇವಾಸಕ್ತ ಸಂಸ್ಥೆಗಳು ನಗರಗಳಲ್ಲಿ ಕಾರ್ಯಪ್ರವೃತ್ತವಾಗಿರುತ್ತವೆ. ಆದರೆ, ತುರ್ತು ಮತ್ತು ಸಕಾಲಿಕ ನೆರವು ಒದಗಿಸುವವರು ಕುಟುಂಬದ ಸದಸ್ಯರೇ ಆದರೆ ಪರಿಣಾಮಕಾರಿ. ಸೂಕ್ಷ್ಮ ಮನಸ್ಸಿನವರು ಒಂದು ವಿಷಯ ಮನದಟ್ಟು ಮಾಡಿಕೊಳ್ಳಬೇಕು. ಅದೆಂದರೆ, ದೇವರು ಈ ಜನ್ಮದಲ್ಲಿ ಕೊಟ್ಟಿರುವ ಜೀವಕ್ಕೆ ಆಗಿಹೋಗಿರುವ ಸಂಗತಿಗಳನ್ನು ಅಳಿಸಿ ಬೇರೆಯದನ್ನು ಬರೆಯಲು ಅವಕಾಶವಿಲ್ಲ. ಆದರೆ, ಉಳಿದ ಶೇಷ ಜೀವನವನ್ನು ಅದರ ಆಧಾರದಲ್ಲಿ ಸೂಕ್ತ ರೀತಿಯಲ್ಲಿ ಮಾರ್ಪಡಿಸಿ ಬಾಳಲು ಅವಕಾಶವಿದೆ. ಈ ಜಗತ್ತಿನಲ್ಲಿ ಬಲಿಷ್ಠರಿಗೆ ಅವಕಾಶವಿದೆ. ದೇವರೂ ಸಹ ದುರ್ಬಲರನ್ನು ಘಾತಿಸುತ್ತಾನೆ ಎಂಬ ನಾಣ್ನುಡಿಯೇ ಇದೆ. ಆದ್ದರಿಂದ ಮಾನಸಿಕವಾಗಿ ಗಟ್ಟಿಗೊಳ್ಳುವುದು ಅತಿ ಅವಶ್ಯಕವಾಗಿದೆ. ನಾವು ಒಂಟಿ, ನಮಗೆ ಏನೂ ಮಾಡಲಾಗುವುದಿಲ್ಲವೆಂದು ಅಸಹಾಯಕತೆಯಿಂದ ಕುಗ್ಗಿದರೆ ಹಾನಿ ನಿಶ್ಚಿತ. ಏನೇ ಬರಲಿ, ಒಂದು ಕೈ ನೋಡೇಬಿಡೋಣ ಎಂದು ಮುನ್ನಡೆದರೆ ಯಶಸ್ಸಿನ ಬಾಗಿಲು ತೆರೆದುಕೊಳ್ಳುತ್ತದೆ. ಪರಿಹಾರವಿಲ್ಲದ ಸಮಸ್ಯೆಗಳಿಲ್ಲ ಎಂಬುದನ್ನು ಮನಗಂಡು ಮುನ್ನಡೆದರೆ ಮನಸ್ಸು ವಿಹ್ವಲಗೊಳ್ಳುವ ಸಂಭವ ಕಡಿಮೆ. ಬದುಕೋಣ, ಸಾಯುವವರೆಗೂ ಬದುಕೋಣ, ಸಾಯುತ್ತಾ ಬದುಕದಿರೋಣ, ಬದುಕಿ ಸಾಯೋಣ. 
ಒಂಟಿಯೆಂದೆನುತ ಕೊರಗದಿರು ಮರುಳೆ
ಕೊರಗಿ ಮುದುಡಿದರೆ ಜೊತೆಗಾರು ಸಿಗರು |
ಮೈಕೊಡವಿ ಮೇಲೆದ್ದು ಮುಂದಡಿಯನಿಡಲು
ಎಲ್ಲರೂ ನಿನ್ನವರೆ ತಿಳಿಯೊ ಮೂಢ ||
-ಕ.ವೆಂ.ನಾಗರಾಜ್.
**************
8.12.2014ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:


3 ಕಾಮೆಂಟ್‌ಗಳು:

  1. ಬಹಳ ಅರ್ಥಪೂರ್ಣ ಲೇಖನ, ಇಂದಿನ ಸಮಾಜದಲ್ಲಿ ಒಂದಿಲ್ಲೊಂದು ಕಾರಣಕ್ಕೆ ನೊಂದು ಸಾವಿನತ್ತ ಮುಖ ಮಾಡುವ ಅಸಹಾಯಕ ಮನಸ್ಸುಗಳು ಹೆಚ್ಚಾಗುತ್ತಿವೆ, ಅಂಥವರ ಹಾಗೂ ಅವರ ಸುತ್ತಲಿನವರ ಕಣ್ತೆರೆಸುವಂತಿದೆ.

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ನಿಮ್ಮ ಪ್ರತಿಕ್ರಿಯೆಗೆ ವಂದನೆಗಳು, ಮಂಜುರವರೇ.

      ಅಳಿಸಿ
    2. Prakash Narasimhaiya on December 17, 2014 - 4:02pm
      ಆತ್ಮೀಯ ನಾಗರಾಜರೇ,
      ಆತ್ಮಹತ್ಯೆಯ ಬಗೆಗಿನ ಅವಲೋಕನ ಚನ್ನಾಗಿದೆ.ಸಾಯುವುದು ಖಂಡಿತ ಸುಲಭವಲ್ಲ. ಸಾಯಲು ತೀರ್ಮಾನ ಮಾಡಿದ ವ್ಯಕ್ತಿ ಸಾಯುವ ಮುಂಚೆಯೇ ಹಲವಾರು ಬಾರಿ ಮಾನಸಿಕವಾಗಿ ಸತ್ತು ಕೊನಗೆ ದೇಹತ್ಯಾಗ ಮಾಡುತ್ತಾನೆ. ಸಾಧು ವಾಸ್ವಾನಿಯವರು ಹೇಳುತ್ತಾರೆ " ಸಾಯಲು ಮಾಡಿಕೊಳ್ಳುವ ತಯಾರಿ ಮತ್ತು ಮಾನಸಿಕ ಸ್ತೈರ್ಯದ ಅರ್ಧದಷ್ಟು ಧೈರ್ಯ ಮಾಡಿ ಸವಾಲನ್ನು ಎದುರಿಸಲು ಮನಸ್ಸು ಮಾಡಿದರೆ ಸಾಕು. ಬದುಕನ್ನು ಸರಾಗವಾಗಿ ಎದುರಿಸಿ ಬಾಳಬಹುದು ."
      ಉತ್ತಮ ವಿಚಾರ ಹಂಚಿಕೊಂದದಕ್ಕೆ ಧನ್ಯವಾದಗಳು
      ಪ್ರಕಾಶ್

      kavinagaraj
      ಧನ್ಯವಾದ, ಪ್ರಕಾಶರೇ. 'ಗೂಗಲ್ ಗುರು' ಕೊಟ್ಟ ಮಾಹಿತಿಯಲ್ಲಿ ಸಾಕ್ರೆಟಿಸ್ ಆತ್ಮಹತ್ಯೆ ಮಾಡಿಕೊಂಡವರ ಪಟ್ಟಿಯಲ್ಲಿತ್ತು. ಹಾಗಾಗಿ ಸೇರಿಸಿದ್ದೆ. ತಿದ್ದಿರುವೆ. ಪ್ರತಿಕ್ರಿಯೆಗೆ ವಂದನೆಗಳು.

      ಅಳಿಸಿ