ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಸೋಮವಾರ, ಸೆಪ್ಟೆಂಬರ್ 2, 2013

ಯಜ್ಞೋಪವೀತ - ಒಂದು ಜಿಜ್ಞಾಸೆ

     ಬ್ರಾಹ್ಮಣ್ಯದ ಸಂಕೇತವೆನ್ನಲಾಗುವ ಯಜ್ಞೋಪವೀತ(ಜನಿವಾರ)ದ ಕುರಿತು ಮನಸ್ಸಿನಲ್ಲಿ ಆಗಾಗ ಏಳುವ ವಿಚಾರತರಂಗಗಳು ವಿಮರ್ಶಾರ್ಹವಾಗಿವೆ. ಪ್ರಸ್ತುತ ಆಚರಣೆಯಲ್ಲಿರುವಂತೆ ಹುಟ್ಟಿನಿಂದ ಬ್ರಾಹ್ಮಣರೆನಿಸುತ್ತಿದ್ದು, ತಂದೆ ಬ್ರಾಹ್ಮಣನಾಗಿದ್ದರೆ ಮಗನೂ ಬ್ರಾಹ್ಮಣನೆನಿಸುತ್ತಾನೆ ಮತ್ತು  ಜನಿವಾರವೆನ್ನುವುದು ಬ್ರಾಹ್ಮಣನಾಗಿರುವ ಸೂಚಕವಾಗಿರುತ್ತದೆ. ಆಚರಣೆಯಲ್ಲಿರುವ ಈ  ನಂಬಿಕೆಗೂ ವಾಸ್ತವ ಸತ್ಯಕ್ಕೂ ಇರುವ ಅಜಗಜಾಂತರ ವ್ಯತ್ಯಾಸ ಪೂರ್ವಾಗ್ರಹರಹಿತರಾಗಿ ವಿಚಾರ ವಿಮರ್ಶೆ ಮಾಡುವ ಮನಸ್ಸುಗಳಿಗೆ ಅರ್ಥವಾಗಬಹುದು. ನಾಲ್ಕೂ ವೇದಗಳಲ್ಲಿ ಈಗ ಲಭ್ಯವಿರುವುದೆಂದು ಹೇಳಲಾಗಿರುವ ಇಪ್ಪತ್ತು ಸಾವಿರಕ್ಕೂ ಹೆಚ್ಚಿನ ಮಂತ್ರಗಳ ಪೈಕಿ ಯಾವುದೇ ಒಂದು ಮಂತ್ರದಲ್ಲೂ ಹುಟ್ಟಿನಿಂದ ಬರುವ ಜಾತಿಪದ್ಧತಿಯನ್ನು ಸಮರ್ಥಿಸುವ ಒಂದು ಮಂತ್ರವೂ ಇಲ್ಲವೆಂದು ಹೇಳುತ್ತಾರೆ. ವೇದಗಳಲ್ಲಿ ಬರುವ ಬ್ರಾಹ್ಮಣ, ವೈಶ್ಯ, ಶೂದ್ರ, ಕ್ಷತ್ರಿಯರ ಕುರಿತು ಉಲ್ಲೇಖಗಳು ವರ್ಣಗಳಾಗಿವೆ. ವರ್ಣ ಪದದ ಅರ್ಥ 'ಆರಿಸಿಕೊಳ್ಳುವುದು' ಎಂಬುದಾಗಿದೆ. ಯಾರೇ ಆಗಲಿ, ತಮ್ಮ ತಮ್ಮ ಗುಣ, ಸಾಮರ್ಥ್ಯ, ಕರ್ಮ, ಸ್ವಭಾವ, ಇತ್ಯಾದಿಗಳಿಗೆ ಹೊಂದುವ ವರ್ಣವನ್ನು ಆರಿಸಿಕೊಳ್ಳಲು ಅವಕಾಶವಿದ್ದು, ಅದರಲ್ಲಿ ಮೇಲು-ಕೀಳುಗಳ ಪ್ರಶ್ನೆಯಿಲ್ಲ. ಹುಟ್ಟಿನಿಂದ ಯಾರೂ ಈ ವರ್ಣಗಳಿಗೆ ಸೇರಿದವರೆಂದು ಪರಿಗಣಿಸಲಾಗದು. ಯಾವುದೋ ಗೊತ್ತಿಲ್ಲದ ಬಹಳ ಹಿಂದಿನ ಕಾಲಘಟ್ಟದಲ್ಲಿ ಮೇಲು-ಕೀಳುಗಳ ಭಾವನೆಯನ್ನು ಸಮಾಜದ್ರೋಹಿಗಳು  ಸೃಷ್ಟಿಸಿರಬಹುದಾಗಿದ್ದು, ವೇದಗಳಲ್ಲಿ ಮೇಲು-ಕೀಳುಗಳ ಭಾವನೆ ಎಲ್ಲೂ ಇರುವುದಿಲ್ಲ. ಈ ವಿಚಾರವೇ ದೀರ್ಘವಾಗಿ ಚರ್ಚಿಸಬಹುದಾದ ಸಂಗತಿಯಾಗಿದೆ.
     ಭಗವಂತನ ಸ್ಟೃಷ್ಟಿಯಲ್ಲಿ ಅನೇಕ ಜೀವವೈವಿಧ್ಯಗಳಿವೆ. ವಿವಿಧ ಜೀವಿಗಳ ವರ್ಗಗಳನ್ನೇ ಜಾತಿಗಳೆನ್ನಬಹುದು. ಯಾವುದೇ ನಾಯಿಯನ್ನು ನೋಡಿದಾಕ್ಷಣ ಅದನ್ನು ನಾಯಿ ಎನ್ನಬಹುದು. ಕತ್ತೆಯ ಹೊಟ್ಟೆಯಲ್ಲಿ ಹುಟ್ಟುವುದು ಕತ್ತೆಯೇ ಹೊರತು ಬೆಕ್ಕಲ್ಲ. ಹಾಗೆಯೇ ಮನುಷ್ಯರಿಂದ ಮನುಷ್ಯರು ಹುಟ್ಟುತ್ತಾರೆಯೇ ಹೊರತು ಬೇರೆ ಅಲ್ಲ. ಹಾಗಾಗಿ ಮನುಷ್ಯರನ್ನು ಮನುಷ್ಯರ ಜಾತಿ ಅನ್ನಬಹುದೇ ಹೊರತು ಬೇರೆ ಹೇಳಲಾಗದು. ಭಗವಂತನ ಸೃಷ್ಟಿಯಲ್ಲಿನ ವೈವಿಧ್ಯ ಒಂದಕ್ಕೊಂದು ಪೂರಕವಾಗಿದ್ದರೆ, ಮಾನವನಿರ್ಮಿತ ವೈವಿಧ್ಯ ಹೆಚ್ಚಿನ ಸಂಗತಿಗಳಲ್ಲಿ ವಿನಾಶಕವಾಗಿವೆ. ಹುಟ್ಟಿನ ಜಾತಿ ಅನ್ನುವುದು ಮಾನವರ ಸೃಷ್ಟಿಯೇ ಹೊರತು ಮತ್ತೇನಲ್ಲ. ಅದು ದೇವರ ಸೃಷ್ಟಿ ಆಗಿದ್ದರೆ ನೋಡಿದ ತಕ್ಷಣ ಇಂತಹ ಜಾತಿ ಎಂದು ಹೇಳಲು ಅವಕಾಶವಿರುತ್ತಿತ್ತು.  ತಂದೆ-ತಾಯಿಯರು ಗೊತ್ತಿಲ್ಲದ ಅನಾಥರದ್ದು ಯಾವ ಜಾತಿ? ಆಗ ತಾನೇ ಹುಟ್ಟಿದ ಏಳೆಂಟು ಮಕ್ಕಳನ್ನು ಒಂದೆಡೆಯಿಟ್ಟು ಯಾವ ಮಗು ಯಾವ ಜಾತಿ ಗುರುತಿಸಿ ಎಂದರೆ ಗುರುತಿಸಲು ಸಾಧ್ಯವಿದೆಯೇ? ಸಾಧ್ಯವಿಲ್ಲ. ಮಾನವನಿರ್ಮಿತ ಜಾತಿಯನ್ನು ಬದಲಾಯಿಸಿಕೊಳ್ಳಲು ಅವಕಾಶವಿದೆ. ಒಬ್ಬ ಹಿಂದೂ ಮುಸಲ್ಮಾನನಾಗಬಲ್ಲ, ಒಬ್ಬ ಕ್ರಿಶ್ಚಿಯನ್ ಹಿಂದೂ ಆಗಬಲ್ಲ. ಆದರೆ ದೇವರ ಸೃಷ್ಟಿಯಾದ ಒಂದು ಕುದುರೆ ನಾಯಿಯಾಗಬಹುದೇ? ಬೆಕ್ಕು ಇಲಿಯಾಗಲು ಸಾಧ್ಯವೇ? ಹುಟ್ಟಿನಿಂದ ಜಾತಿ ಬರುವುದಿಲ್ಲ ಎಂಬುದಕ್ಕೆ ಇಷ್ಟು ಸಾಕೆನಿಸುತ್ತದೆ. ಮನುಷ್ಯರಲ್ಲಿ ಇರುವುದು ಒಂದೇ ಜಾತಿ, ಅದು ಮನುಷ್ಯ ಜಾತಿ ಅಷ್ಟೆ. 
     ೧೬ ಸಂಸ್ಕಾರಗಳಲ್ಲಿ ಒಂದಾದ ಉಪನಯನ ಸಂಸ್ಕಾರದ ಸಂದರ್ಭದಲ್ಲಿ ಯಜ್ಞೋಪವೀತ (ಜನಿವಾರವನ್ನು) ಹಾಕಿಸಲಾಗುತ್ತದೆ. 'ಉಪ' ಎಂದರೆ ಸಮೀಪಕ್ಕೆ, 'ನಯನ'ವೆಂದರೆ ಕರೆದೊಯ್ಯುವುದು ಎಂಬುದು ಪದಶಃ ಅರ್ಥ. ಹಿಂದೆ ಮಕ್ಕಳಿಗೆ ವೇದಾಭ್ಯಾಸ, ಶಿಕ್ಷಣ ಕೊಡಿಸುವ ಸಲುವಾಗಿ ಸುಯೋಗ್ಯ ಗುರುಕುಲಕ್ಕೆ ಕಳುಹಿಸಿಕೊಡುವಾಗ ಈ ಉಪನಯನ ವಿಧಿಯನ್ನು ಆಚರಿಸಲಾಗುತ್ತಿತ್ತು. ಜಾತಿ ಮತ್ತು ಲಿಂಗ ತಾರತಮ್ಯವಿಲ್ಲದೆ ಗುರುಕುಲಕ್ಕೆ ಹೋಗುವ ಮಕ್ಕಳೆಲ್ಲರೂ ಈ ವಿಧಿಯನ್ನು ಪಾಲಿಸಿ ಯಜ್ಞೋಪವೀತಧಾರಿಗಳಾಗುತ್ತಿದ್ದರು. ಯಜ್ಞೋಪವೀತ ಧರಿಸುವಾಗ 'ನಾನು ಸತ್ಯದ ದಾರಿಯಲ್ಲಿ ನಡೆಯುತ್ತೇನೆ; ವ್ರತಗಳನ್ನು ಪಾಲಿಸುತ್ತೇನೆ; ಶಿಸುಬದ್ದ ಜೀವನ ನಡೆಸುತ್ತೇನೆ' ಎಂದು ಅಗ್ನಿಸಾಕ್ಷಿಯಾಗಿ ಪ್ರತಿಜ್ಞೆ ಮಾಡಿಸುವುದಿದೆ. ಆಗಲೇ ಹೇಳಿರುವಂತೆ ಯಾವುದೋ ಹಿಂದಿನ ಕಾಲಘಟ್ಟದಲ್ಲಿ ಕ್ರಮೇಣ ಅದು ಒಂದು ವರ್ಗಕ್ಕೆ ಮತ್ತು ಪುರುಷರಿಗೆ ಮಾತ್ರ ಸೀಮಿತವಾದ ಕ್ರಿಯೆಯಾಗಿ ಪರಿವರ್ತಿತವಾಗಿಬಿಟ್ಟಿದೆ. ವೇದದ ಬೆಳಕಿನಲ್ಲಿ ಸತ್ಯವನ್ನು ಅರಸುವ ಯಾರಿಗೇ ಆಗಲಿ, ಇದು ಒಂದು ವರ್ಗದವರಿಗೆ ಅಥವ ಪುರುಷರಿಗೆ ಮಾತ್ರ ಸೀಮಿತವಾದ ಸಂಸ್ಕಾರವಲ್ಲವೆಂಬುದು ಗೋಚರವಾಗದಿರದು.
     ಯಜ್ಞೋಪವೀತವೆನ್ನುವುದು ದೇವಋಣ, ಪಿತೃಋಣ ಮತ್ತು ಆಚಾರ್ಯಋಣಗಳನ್ನು ತೀರಿಸಲು ಬದ್ಧತೆಯನ್ನು ಜ್ಞಾಪಿಸುವ ಸಾಧನ ಮತ್ತು ಆ ಮೂರು ಋಣಗಳನ್ನು ತೀರಿಸುವ ಸಂಕಲ್ಪ ಮಾಡುವ ಸಂಕೇತವಾಗಿದೆ. ಈ ಮೂರು ಋಣಗಳು ಕೇವಲ ಒಂದು ನಿರ್ದಿಷ್ಟ ವರ್ಗ ಅಥವ ಲಿಂಗಕ್ಕೆ ಸೀಮಿತ ಎಂದರೆ ಹಾಸ್ಯಾಸ್ಪದವೆನಿಸುತ್ತದೆ. ಋಗ್ವೇದದ ಈ ಎರಡು ಮಂತ್ರಗಳು ಯಜ್ಞೋಪವೀತಧಾರಿಯ ಕರ್ತವ್ಯಗಳನ್ನು ಹೇಳುತ್ತವೆ:
ತ್ರಿವಂಧುರೇಣ ತ್ರಿವ್ರತಾ ರಥೇನ ತ್ರಿಚಕ್ರೇಣ ಸುವೃತಾ ಯಾತಮರ್ವಾತ್ |
ಪಿನ್ವತಂ ಗಾ ಜಿನ್ವತಮರ್ವತೋ ನೋ ವರ್ಧಯತಮಶ್ವಿನಾ ವೀರಮಸ್ಯೇ || (ಋಕ್.೧.೧೧೮.೨.)
     ಮೂರು ಉನ್ನತಶೀಲ, ಪ್ರಗತಿಪಥಕ್ಕೊಯ್ಯುವ, ಸತ್ವ ಮತ್ತು ಒಳ್ಳೆಯತನಗಳಿಂದ ಸುತ್ತುವರೆದ, ಮೂರು ಬಂಧನಗಳನ್ನು ಚಕ್ರವಾಗಿ ಹೊಂದಿರುವ ಜೀವನರಥದಲ್ಲಿ ಮುಂದೆ ಸಾಗಿರಿ. ನಿಮ್ಮ ಇಂದ್ರಿಯಗಳು, ವಾಣಿಯನ್ನು ಶಕ್ತಿಯುತವನ್ನಾಗಿಸಿಕೊಳ್ಳಿ, ಜೀವಾತ್ಮ ಚೇತನವನ್ನು ವಿಕಾಸಗೊಳಿಸಿಕೊಳ್ಳಿ ಮತ್ತು ಆತ್ಮನಿಗಾಗಿ ಪ್ರಾಣಶಕ್ತಿ ಹೆಚ್ಚಿಸಿಕೊಳ್ಳಿ ಎಂಬುದು ಇದರ ಅರ್ಥ.
ತ್ರಿವಂಧುರೇಣ ತ್ರಿವ್ರತಾ ಸುವೇಶಸಾ ರಥೇನ ಯಾತಮಶ್ವಿನಾ |
ಕಣ್ವಾಸೋ ವಾಂ ಬ್ರಹ್ಮ ಕೃಣ್ವಂತ್ಯಧ್ವರೇ ತೇಷಾಂ ಸು ಶೃಣುತಂ ಹವಮ್ || (ಋಕ್.೧.೪೭.೨.)
     ಮೂರು ಬಂಧನಗಳ, ಮೂರು ತತ್ವಗಳಿಂದ ಕೂಡಿದ ಸುಶೋಭಿತ ಜೀವನರಥಯಾನ ಮಾಡಿರಿ. ಧ್ಯಾನಶೀಲ ಜ್ಞಾನಿಗಳು ಅಹಿಂಸಾವೃತ್ತಿಯಲ್ಲಿ ತಿಳಿಸಿಕೊಡುವ ವೇದಜ್ಞಾನವನ್ನು ಪಡೆದುಕೊಳ್ಳಿರಿ ಎನ್ನುವ ಮಂತ್ರದ ಅರ್ಥ ಸುಸ್ಪಷ್ಟವಾಗಿದೆ. ಪ್ರತಿ ಜೀವಿಗೆ ಇರುವ ಮೂರು ಋಣಗಳ -ದೇವಋಣ, ಪಿತೃಋಣ ಮತ್ತು ಆಚಾರ್ಯಋಣ- ಬಗ್ಗೆ ಅವನ ಬದ್ಧತೆಯನ್ನು ಜ್ಞಾಪಿಸುವುದೇ ಈ ಮಂತ್ರಗಳ ಉದ್ದೇಶವಾಗಿದೆ.
     ದೇವಋಣವನ್ನು ತೀರಿಸುವುದೆಂದರೆ ಭಗವಂತನ ಸೃಷ್ಟಿಯಾದ ಪಂಚಭೂತಗಳಿಂದ ನಿಹಿತವಾಗಿರುವ ಶರೀರದ ಋಣ ತೀರಿಸುವ ಸಲುವಾಗಿ ಪಂಚಭೂತಗಳಾದ ಜಲ, ನೆಲ, ಆಕಾಶ, ಅಗ್ನಿ, ವಾಯುಗಳ ಸದುಪಯೋಗ ಮಾಡಿಕೊಳ್ಳುವುದರೊಟ್ಟಿಗೆ ಅವುಗಳ ರಕ್ಷಣೆಯ ಹೊಣೆಯನ್ನೂ ಹೊರುವುದು. ಪಿತೃಋಣವನ್ನು ತೀರಿಸುವುದೆಂದರೆ ಭೌತಿಕ ಶರೀರ ಬರಲು ಕಾರಣರಾದ, ಪ್ರೌಢಾವಸ್ಥೆಗೆ ಬರುವವರೆಗೂ ಮತ್ತು ನಂತರದಲ್ಲೂ ಎಲ್ಲಾ ರೀತಿಯ ಸೇವೆ ಮಾಡಿ, ಪಾಲಿಸಿ, ಪೋಷಿಸಿದವರಿಗೆ ಪ್ರತಿಯಾಗಿ ಅವರ ಸೇವೆಯನ್ನು ಮಾಡುತ್ತಾ ಸಂತೋಷದಿಂದ ಇರುವಂತೆ ನೋಡಿಕೊಳ್ಳುವುದು. ಇಂದಿನ ಪ್ರಗತಿಗೆ, ಉನ್ನತಿಗೆ ಕಾರಣರಾದ, ಸುಯೋಗ್ಯ ಮಾರ್ಗದರ್ಶನ ಮಾಡಿದ ಎಲ್ಲಾ ಆಚಾರ್ಯರುಗಳ ಪ್ರತಿ ಶ್ರದ್ಧಾಗೌರವಗಳನ್ನು ಹೊಂದುವುದು ಮತ್ತು ಮುಖ್ಯವಾಗಿ ನಮಗೆ ತಿಳಿದ ಜ್ಞಾನವನ್ನು ಮುಂದಿನವರಿಗೆ ತಿಳಿಸುವ, ಹಂಚುವ ಕೆಲಸವನ್ನು ಮಾಡುವುದು  ಆಚಾರ್ಯಋಣವನ್ನು ತೀರಿಸುವ ಉತ್ತಮ ರೀತಿಯಾಗಿದೆ. ಮಾನವಧರ್ಮದ ಮೂರು ಬೇರ್ಪಡಿಸಲಾಗದ ಅಂಗಗಳಾದ ಜ್ಞಾನ, ಕರ್ಮ ಮತ್ತು ಉಪಾಸನೆಗಳನ್ನೂ ಸಹ ಯಜ್ಞೋಪವೀತದ ಮೂರು ಎಳೆಗಳು ಸಂಕೇತಿಸುತ್ತವೆ. ಜೀವನದ ಉದ್ದೇಶವಾದ ಸತ್ಯದ ಅನ್ವೇಷಣೆಗೆ ಜ್ಞಾನ ಅಗತ್ಯ. ಕೇವಲ ಜ್ಞಾನದಿಂದ ಪ್ರಯೋಜನವಿಲ್ಲ, ಅದನ್ನು ಅನುಷ್ಠಾನಗೊಳಿಸುವ ಕರ್ಮದಿಂದ ಜ್ಞಾನಕ್ಕೆ ಅರ್ಥ ಬರುತ್ತದೆ. ಜ್ಞಾನ, ಕರ್ಮಗಳನ್ನು ಭಗವಂತನ ಕೃಪೆಯೆಂದು ತಿಳಿದು ಮಾಡುವುದೇ ಉಪಾಸನೆ.
     ಇನ್ನೊಂದು ವಿಷಯವನ್ನು ಇಲ್ಲಿ ಪ್ರಸ್ತಾಪಿಸಬೇಕೆನ್ನಿಸುತ್ತಿದೆ. ಯಜ್ಞೋಪವೀತವೆನ್ನುವುದು ದೇವಋಣ, ಪಿತೃಋಣ ಮತ್ತು ಆಚಾರ್ಯಋಣಗಳನ್ನು ನೆನಪಿಸುವ ಬಾಹ್ಮಣಿಕೆಯ (ಜಾತಿಯಲ್ಲ), ಸಜ್ಜನಿಕೆಯ, ಸಚ್ಚಾರಿತ್ರ್ಯದ ನಡವಳಿಕೆಯನ್ನು ಹೊಂದುವ ಸಂಕಲ್ಪದ ಸಂಕೇತವೇ ಹೊರತು ಮತ್ತೇನೂ ಅಲ್ಲ. ಸಜ್ಜನಿಕೆಯ, ಸಚ್ಚಾರಿತ್ರ್ಯವನ್ನು ಹೊಂದುವುದು ನಿಜವಾದ ಮಾನವಧರ್ಮವಾಗಿದೆ. ಯಜ್ಞೋಪವೀತ ಧರಿಸಿದವರು ಸಚ್ಚಾರಿತ್ರ್ಯವಂತನಾದರೆ ಯಜ್ಞೋಪವೀತಕ್ಕೆ ಬೆಲೆಯಿರುತ್ತದೆ. ನೇರವಾಗಿ ಹೇಳಬೇಕೆಂದರೆ ಯಜ್ಞೋಪವೀತ ಧರಿಸಿದಾಕ್ಷಣ ಒಬ್ಬ ಸಚ್ಚಾರಿತ್ರ್ಯವಂತನಾಗುವುದಿಲ್ಲ ಅಥವ ಈಗಿನ ಬಳಕೆಯಲ್ಲಿ ತಿಳಿದಿರುವಂತೆ ಬ್ರಾಹ್ಮಣ್ಯ ಬರುವುದಿಲ್ಲ. ಯಜ್ಞೋಪವೀತವು ಅದನ್ನು ಧರಿಸಿದವರು ಬ್ರಾಹ್ಮಣ್ಯವನ್ನು(ಜಾತಿಯಲ್ಲ), ಸಚ್ಚಾರಿತ್ರ್ಯವನ್ನು ಗಳಿಸಬೇಕೆಂದು, ಉಳಿಸಿಕೊಳ್ಳಬೇಕೆಂದು ನೆನಪಿಸುವ ಕೇವಲ ಸಾಧನ ಮಾತ್ರವಾಗಿದೆ.

     ಕೇವಲ ಉತ್ತಮ ವಿಚಾರ ಹೊಂದಿದ್ದರೆ ಸಾಲದು, ಅದು ಆಚರಣೆಗೂ ಬರಬೇಕು. ಹಾಗಾದಾಗ ಮಾತ್ರ ವಿಚಾರಕ್ಕೆ ಬೆಲೆ, ಮನ್ನಣೆ ಸಿಗುತ್ತದೆ. ವಿಚಾರ ಮತ್ತು ಆಚಾರದ ಸಮನ್ವಯತೆ ಕಂಡ ಈ ಪ್ರಸಂಗ ಉಲ್ಲೇಖಾರ್ಹವಾಗಿದೆ. ಹಾಸನದ ವೇದಭಾರತೀ ಸಂಸ್ಥೆಯು ಕಳೆದ ಒಂದು ವರ್ಷದಿಂದಲೂ ಜಾತಿ, ಮತ, ಪಂಥ, ಲಿಂಗ ಮತ್ತು ವಯೋತಾರತಮ್ಯವಿಲ್ಲದೆ ಎಲ್ಲರಿಗೂ ವೇದಾಭ್ಯಾಸ ಮಾಡುವ ಅವಕಾಶ ಕಲ್ಪಿಸಿದೆ. ಹಲವಾರು ಚಿಂತಕರುಗಳಿಂದ ಉಪನ್ಯಾಸಗಳು, ಸಂವಾದಗಳನ್ನು ಏರ್ಪಡಿಸಿದೆ. ಮಕ್ಕಳಲ್ಲೂ ವೇದದ ಕಲಿಕೆ ಪ್ರೋತ್ಸಾಹಿಸಲು ಬಾಲಸಂಸ್ಕಾರ ಶಿಬಿರ ನಡೆಸಿದೆ. ಇತ್ತೀಚೆಗೆ ಮೂರು ದಿನಗಳ ವೇದೋಕ್ತ ಜೀವನ ಶಿಬಿರವನ್ನೂ ಹಾಸನದಲ್ಲಿ ನಡೆಸಿದ್ದು, ಮಹಾರಾಷ್ಟ್ರದ ಪುಣೆ, ಕರ್ನಾಟಕದ ಬೆಂಗಳೂರು, ದೊಡ್ಡಬಳ್ಳಾಪುರ, ತುಮಕೂರು, ಭದ್ರಾವತಿ, ಕನಕಪುರ, ಬೆಳ್ತಂಗಡಿ, ಚನ್ನರಾಯಪಟ್ಟಣ, ಬೇಲೂರು ಮತ್ತು ಹಾಸನಗಳಿಂದ ಬಂದಿದ್ದ ಸುಮಾರು ೬೦ ಆಸಕ್ತರು ಭಾಗವಹಿಸಿದ್ದರು. ಶಿಬಿರದ ಕೊನೆಯ ದಿನದಂದು ಏಳು ಶಿಬಿರಾರ್ಥಿಗಳು -ನಾಲ್ವರು ಮಹಿಳೆಯರೂ ಸೇರಿದಂತೆ- 'ಉಪನಯನ' ಸಂಸ್ಕಾರ ಪಡೆದರು. ಶ್ರೀ ಸುಧಾಕರ ಶರ್ಮರವರು ಉಪನಯನದ ನೈಜ ಅರ್ಥವನ್ನು ಮತ್ತು ಉಪನಯನ ವಿಧಿಯ ಪ್ರತಿ ಮಂತ್ರಾರ್ಥವನ್ನು ವಿವರಿಸುತ್ತಿದ್ದರೆ, ಅಲ್ಲಿ ಹಾಜರಿದ್ದ ಪ್ರತಿಯೊಬ್ಬರೂ ತನ್ಮಯತೆಯಿಂದ ಕೇಳಿ ವಿಚಾರಗಳನ್ನು ಸರಿಯೆಂದು ಮನಗಂಡಿದ್ದು ವಿಶೇಷವಾಗಿತ್ತು. ಪತ್ರಿಕಾ ಮತ್ತು ದೃಷ್ಯಮಾಧ್ಯಮಗಳವರೂ ಈ ವಿಶೇಷ ಕಾರ್ಯಕ್ರಮದ ಸಂದರ್ಭದಲ್ಲಿ ಹಾಜರಿದ್ದು, ಸುದ್ದಿ ಎಲ್ಲೆಡೆಯೂ ಪ್ರಚುರವಾಯಿತು. ಈಗಿನವರ ದೃಷ್ಟಿಯಲ್ಲಿ ಹುಟ್ಟಿನಿಂದ ಬ್ರಾಹ್ಮಣರೆನಿಸದವರೂ ಸಂಸ್ಕಾರ ಪಡೆದ ಈ ಏಳು ಜನರಲ್ಲಿದ್ದರು. ಶ್ರದ್ಧೆಯಿಂದ ವೇದಾಭ್ಯಾಸ ಮಾಡುತ್ತಿರುವ ಅವರು ಈ ಸಂಸ್ಕಾರ ಪಡೆದುದು ಸ್ತುತ್ಯಾರ್ಹವೇ ಆಗಿದೆ. ಅವರು ಯಜ್ಞೋಪವೀತ ಧರಿಸಿ ಈಗಿನ ರೂಢಿಯ ಬ್ರಾಹ್ಮಣರೆನಿಸುವ ಸಲುವಾಗಿ ಜಾತಿ ಬದಲಾಯಿಸಿಕೊಳ್ಳಬೇಕೆಂದುಕೊಂಡವರಲ್ಲ, ಬದಲಾಯಿಸಿಕೊಂಡವರಲ್ಲ, ಆ ಉದ್ದೇಶವೂ ಅವರದಲ್ಲ ಮತ್ತು ಅದರ ಅಗತ್ಯವೂ ಅವರಿಗಿಲ್ಲ. ಮೊದಲೇ ಹೇಳಿದಂತೆ ಹುಟ್ಟಿನ ಜಾತಿಗೆ ಮತ್ತು ಲಿಂಗಭೇದಕ್ಕೆ ವೇದಗಳಲ್ಲಿ ಯಾವುದೇ ಸ್ಥಾನವಿಲ್ಲ. ವೇದಗಳು ಹೇಳುವ ನೈಜ ವಿಚಾರಗಳಿಗೆ ಮನಸೋತು ಸ್ವ ಇಚ್ಛೆಯಿಂದ ಯಜ್ಞೋಪವೀತ ಧರಿಸಿದ ಅವರು ಅಭಿನಂದನಾರ್ಹರು. ಮಹಿಳೆಯರು ವೇದಾಭ್ಯಾಸ ಮಾಡಬಾರದು, ವೇದಗಳು ಒಂದು ವರ್ಗದ ಸ್ವತ್ತು ಎಂಬ ರೂಢಿಗತ ಅಂಧ ನಂಬಿಕೆಗಳನ್ನು ಅಲುಗಾಡಿಸಿ ವೇದ ತೋರಿದ ಸತ್ಯ ಪಥದಲ್ಲಿ ನಡೆದ, ವೇದಾಧ್ಯಯನದಲ್ಲಿ ಆಸಕ್ತಿ ಹೊಂದಿದ, 'ಆಡದೆ ಮಾಡಿದ ರೂಢಿಯೊಳಗುತ್ತಮರ' ಸಾಲಿಗೆ ಸೇರಿದ ಅವರೇ ಧೈರ್ಯವಂತರು. ಏನಾದರೂ ಬದಲಾವಣೆ ಬರುವುದಿದ್ದರೆ ಇಂತಹವರಿಂದಲೇ ಸರಿ!   
-ಕ.ವೆಂ.ನಾಗರಾಜ್.

4 ಕಾಮೆಂಟ್‌ಗಳು:

  1. > ಯಾವುದೇ ನಾಯಿಯನ್ನು ನೋಡಿದಾಕ್ಷಣ ಅದನ್ನು ನಾಯಿ ಎನ್ನಬಹುದು.
    ಅದು ನಿಜ. ಹಾಗೆಂದ ಮಾತ್ರಕ್ಕೆ ನಾಯಿಗಳಲ್ಲಿ ಜಾತಿಯಿಲ್ಲವೆಂದಾಗುವುದಿಲ್ಲ ಅಲ್ಲವೇ?
    ಆಲ್ಸಿಷನ್, ಪಮೇರಿಯನ್, ಜರ್ಮನ್ ಷೆಫರ್ಡ್, ಫಾಕ್ಸ ಹೌಂಡ್, ಇತ್ಯಾದಿ ಅನೇಕ ಜಾತಿಗಳು ನಾಯಿಗಳಲ್ಲಿವೆ.
    ಅವುಗಳ ಜಾತಿಗೆ ಅನುಗುಣವಾಗಿ ಅವುಗಳ ಬೆಲೆಯೂ ಏರುಪೇರಾಗುತ್ತದೆ.
    ಜಾತಿಯೆನ್ನುವುದು ಪ್ರಕೃತಿಯೇ ನೀಡಿರುವ ವ್ಯವಸ್ಥೆ.
    ಅದೇ ರೀತಿ ಮನುಷ್ಯರಲ್ಲಿಯೂ ಜಾತಿಗಳಿವೆ.
    ನೀವು ಗುಣದಿಂದ ವರ್ಣ ಎಂದು ಹೇಳಿದಿರಿ. ಆದರೆ, ಕರ್ಮ (ಅಥವಾ ಕೆಲಸ/ವೃತ್ತಿ)ಯ ಮೇಲೂ ವಿಂಗಡನೆ ಮಾಡಲಾಗಿದೆ ಅಲ್ಲವೇ? ಭಗವದ್ಗೀತೆಯಲ್ಲಿಯೇ "ಗುಣಕರ್ಮ ವಿಭಾಗಶಃ" ಎಂಬ ಉಲ್ಲೇಖ ಬರುವುದು ಇದನ್ನೇ ಸೂಚಿಸುತ್ತದೆ ಅಲ್ಲವೇ?

    ಸಮಾಜ ಜೀವನವೆನ್ನುವುದು ನಿಂತ ನೀರಲ್ಲ. ಅದು ಕಾಲಕ್ಕೆ ಅನುಗುಣವಾಗಿ ಬದಲಾಗುತ್ತಾ ಹೋಗುತ್ತದೆ.
    ವೇದಗಳಲ್ಲಿ ಅಥವಾ ಉಪನಿಷತ್ತುಗಳಲ್ಲಿ ಜಾತಿಯ ಉಲ್ಲೇಖ/ವಿವರಣೆ ಇಲ್ಲದಿರಬಹುದು. ಅದು ಅಂದಿನ ಅಗತ್ಯವಾಗಿರಲಿಲ್ಲ.
    ಆದರೆ, ಕಾಲಕ್ರಮೇಣ ಅದು ಸೇರಿಕೊಂಡಿತು. ಅದನ್ನು ಯಾರೋ ಒಬ್ಬರು ದುರುದ್ದೇಶದಿಂದ ಮಾಡಿದರೆನ್ನುವುದು ಅತ್ಯಂತ ಬಾಲಿಷ ವಿವರಣೆಯಾಗಿಬಿಡುತ್ತದೆ. ಯಾರೋ ಒಬ್ಬರು ತಮ್ಮ ಸ್ವಾರ್ಥಕ್ಕಾಗಿ ಸಮಾಜವನ್ನೇ ಬದಲಿಸಿಬಿಡುತ್ತಾರೆಂದರೆ ಆ ಸಮಾಜದಲ್ಲಿ ಸತ್ವವಿಲ್ಲವೆಂದೇ ಅರ್ಥವಲ್ಲವೇ? ನಮ್ಮದು ಅಷ್ಟೊಂದು ದುರ್ಬಲ ಸಮಾಜವೇ? ನನಗನ್ನಿಸುವುದು, ಸಮಾಜಕ್ಕೆ ಜಾತಿಯ ಅಗತ್ಯವಿತ್ತು; ಹಾಗಾಗಿ ಜಾತಿ ಹುಟ್ಟಿಕೊಂಡಿತು, ಉಳಿದುಕೊಂಡಿತು ಮತ್ತು ಅದರ ಬೇರುಗಳು ಆಳಕ್ಕೆ ಇಳಿದವು. ಆದರೆ, ಕಾಲ ಕಳೆದಂತೆ ವಿಕೃತಿಗಳೂ ಸೇರಿಕೊಳ್ಳುತ್ತಾ ಹೋದವು. ಅನೇಕರಿಗೆ "ನಾನು ಎಲ್ಲರಿಗಿಂತ ಉತ್ತಮ" ಅಥವಾ "ನಾನು ಎಲ್ಲರ ಮೇಲೆ ಅಧಿಕಾರ ಚಲಾಯಿಸಬೇಕು" ಇತ್ಯಾದಿ ಮೇಲರಿಮೆಗೆಳು ಇರುತ್ತವೆ. ಅದೇ ರೀತಿಯ ಮೇಲರಿಮೆಗಳು ಜಾತಿಗಳಲ್ಲೂ ಸೇರಿಕೊಳ್ಳುತ್ತಾ ಹೋದವು; ಸ್ಪರ್ಧೆ ಏರ್ಪಟ್ಟಿತು; ವೈಮನಸ್ಯಗಳೆದ್ದವು; ಕೆಲವು ಜಾತಿಗಳು ಸ್ಪರ್ಧೆಗಳಲ್ಲಿ ಗೆದ್ದವು, ಕೆಲವೊಂದು ಹಿಂದೆ ಬಿದ್ದವು.

    ನೆನಪಿಡಿ. ಜಾತಿವ್ಯವಸ್ಥೆಯಿಂದಲೇ ಹಿಂದು ಸಮಾಜ ಬದುಕುಳಿದಿರುವುದು. ಶತಮಾನಗಳ ಮುಸಲ್ಮಾನ/ಕ್ರೈಸ್ತ ಆಕ್ರಮಣ ಮತ್ತು ಮತಾಂತರಗಳ ವಿರುದ್ದ ತಡೆಗೋಡೆಯಂತಿದ್ದುದು ಜಾತಿಗಿದ್ದ ಹಿಂದುಗಳ ಬದ್ಧತೆಯೇ! ಹೀಗಾಗಿ, ಜಾತಿಯಿಲ್ಲ ಎಂದು ವಾದಿಸುವುದು ವಾಸ್ತವದಿಂದ ದೂರ ಸರಿದಂತೆ. ಜಾತಿ ಎನ್ನುವುದು ಸಹಜವಾದದ್ದು, ಪ್ರಕೃತಿದತ್ತವಾದದ್ದು, ಅದನ್ನು ತೆಗೆದುಹಾಕಲು ಸಾಧ್ಯವಿಲ್ಲ. ಬದಲಾಗಿ, ಜಾತೀಯತೆ ಮತ್ತು ಅಸ್ಪೃಷ್ಯತೆಯನ್ನು ದೂರಗೊಳಿಸಲು ಪ್ರಯತ್ನಿಸುವುದು ಉತ್ತಮ.


    > ಮಾನವನಿರ್ಮಿತ ಜಾತಿಯನ್ನು ಬದಲಾಯಿಸಿಕೊಳ್ಳಲು ಅವಕಾಶವಿದೆ.
    > ಒಬ್ಬ ಹಿಂದೂ ಮುಸಲ್ಮಾನನಾಗಬಲ್ಲ, ಒಬ್ಬ ಕ್ರಿಶ್ಚಿಯನ್ ಹಿಂದೂ ಆಗಬಲ್ಲ.
    ಮುಸಲ್ಮಾನ ಮತ್ತು ಕ್ರೈಸ್ತ ಎನ್ನುವುದು ಜಾತಿಗಳಲ್ಲ. ಅವು ಮತಗಳು. ಒಬ್ಬ ಹಿಂದು ಮುಸಲ್ಮಾನನಾಗುವುದನ್ನು "ಮತಾಂತರ" ಎನ್ನುತ್ತಾರೆ. ಜಾತಿ ವ್ಯವಸ್ಥೆ ಎನ್ನುವುದು ಹಿಂದು ಸಮಾಜದ್ದೇ ಆದ ವಿಶಿಷ್ಟ ವ್ಯವಸ್ಥೆ. ಹಿಂದು ಸಮಾಜದೊಳಗೆ ಜಾತಿ ಬದಲಾಯಿಸುವುದು ಸುಲಭವಲ್ಲ. ಬ್ರಾಹ್ಮಣನೊಬ್ಬ ಕ್ಷತ್ರಿಯನಾಗಿದ್ದು, ಅಥವಾ ಶೂದ್ರನೊಬ್ಬ ಬ್ರಾಹ್ಮಣನಾಗಿದ್ದು ಹೆಚ್ಚಾಗಿ ಕಾಣಬರುವುದಿಲ್ಲ. ಅಲ್ಲೊಬ್ಬ ವಿಶ್ವಾಮಿತ್ರ, ಇಲ್ಲೊಬ್ಬ ವ್ಯಾಸ, ಒಬ್ಬ ಕೃಷ್ಹ್ಣ, ಇತ್ಯಾದಿ ಬೆರಳೆಣಿಕೆಯ ಉದಾಹರಣೆ ಸಿಗಬಹುದು. ಆದರೆ, ಅವರೂ ಸಹ ಜನರ ಮನಸ್ಸಿನಲ್ಲಿ "ಪೂಜ್ಯ"ರೆನಿಸಿಕೊಂಡರೇ ಹೊರತು, ಅವರ ಜಾತಿ ಬದಲಾಯಿತೆಂದು ಎಲ್ಲೂ ಉಲ್ಲೇಖವಾಗಿಲ್ಲ. ನನಗನ್ನಿಸುವ ಮಟ್ಟಿಗೆ, ಹಿಂದೂ ಸಮಾಜದಲ್ಲಿ ಜಾತಿ ಬದಲಾಯಿಸಿಕೊಳ್ಳುವುದು ಸಾಧ್ಯವಿಲ್ಲ.

    > ಆಗ ತಾನೇ ಹುಟ್ಟಿದ ಏಳೆಂಟು ಮಕ್ಕಳನ್ನು ಒಂದೆಡೆಯಿಟ್ಟು ಯಾವ ಮಗು ಯಾವ ಜಾತಿ ಗುರುತಿಸಿ ಎಂದರೆ
    ವ್ಯಕ್ತಿಗೆ ಜಾತಿ ಬರುವುದು ತಂದೆಯಿಂದ ಅಥವಾ ಸಾಕಿದವರಿಂದ. ಹುಟ್ಟಿದ ತಂದೆ ಇರದಿದ್ದರೆ, ಸಾಕಿದವರು ಯಾರಿರುತ್ತಾರೋ ಅವರ ಜಾತಿ ಮಗುವಿಗೆ ಬರುತ್ತದೆ. ಕ್ಷತ್ರಿಯ ಸಂಜಾತನಾದರೂ ಕರ್ಣ "ಸೂತಪುತ್ರ" ಎನಿಸಿಕೊಳ್ಳಲಿಲ್ಲವೇ?

    ವೇದಪುರಾಣಗಳಲ್ಲಿ ಏನು ಹೇಳಿದೆ ಎನ್ನುವುದಕ್ಕಿಂತ, ಆಚರಣೆಯಲ್ಲಿ ಏನಿದೆ ಎನ್ನುವುದೇ ಮುಖ್ಯವೆನಿಸುತ್ತದೆ. ಆಚರಣೆಯಲ್ಲಿರುವುದೇ ವಾಸ್ತವ. ಗ್ರಂಥಗಳಲ್ಲೆ ಹೇಳಿರುವುದೂಂದು, ಆಚರಣೆಯಲ್ಲಿರುವುದು ಮತ್ತೊಂದು ಎಂದರೆ, ಗ್ರಂಥಕ್ಕೆ ಬೆಲೆಯಿಲ್ಲ ಎಂದೇ ಅರ್ಥವಲ್ಲವೇ? ವೇದಗಳು ಹುಟ್ಟಿನಿಂದ ಅಂಟುವ ಜಾತಿಗಳ ಕುರಿತಾಗಿ ಮಾತನಾಡದಿದ್ದರೂ, ಅದಿಂದು ಆಚರಣೆಯಲ್ಲಿರುವುದರಿಂದ ಹೆಚ್ಚಿನ ಮಹತ್ವ ಪಡೆಯುತ್ತದೆ ಮತ್ತು ಅದೇ ಪ್ರಸ್ತುತ. ವಾಸ್ತವವನ್ನು ಒಪ್ಪಿಕೊಳ್ಳುವುದು ಸಮಾಜ ಸುಧಾರಣೆಗೆ ಮೊದಲ ಹೆಜ್ಜೆ.

    ಪ್ರತ್ಯುತ್ತರಅಳಿಸಿ
  2. ನರೇಂದ್ರ ಕುಮಾರ್ ಅವರೇ, ನಾಯಿಗಳಲ್ಲಿ ಪ್ರಭೇದಗಳನ್ನ ನೋಡಿ ಅದನ್ನು ಜಾತಿ ಎಂದು ಕರೆಯುವುದು ಸಮಂಜಸವಲ್ಲ. ಮನುಷ್ಯ ಪ್ರಭೇದಗಳಾದ Mongoloid (Asian and American Indian),Caucasoid (European, Australoid (Australian and oceanic),Negroid (east African black, Capoid (south African black)ಗಳನ್ನೂ ಜಾತಿ ಎನ್ನಬೇಕಾಗುತ್ತದೆ. ಹಾಗಾಗಿ ನಾಲ್ಕು ಜಾತಿಗಳಲ್ಲ ಇನ್ನು ಹೆಚ್ಚಿರಬೇಕು ಏಕೆಂದರೆ ಅವು ಜಾತಿಗಳಲ್ಲ ಪ್ರಭೇದಗಳು.. ಈ ಪ್ರಭೇದಗಳು ನೀವು ಹೇಳಿದಂತೆಯೇ ಪ್ರಕೃತಿ ನೀಡಿದ ವ್ಯವಸ್ತೆಯೇ ಸರಿ.
    ವೇದಗಳಲ್ಲಿರುವುದು ಜಾತಿ ವ್ಯವಸ್ತೆಯ ಪರಿವಿಡಿಯು ಅಲ್ಲ, ಪಾಪ ಮಾಡಿದ ನಂತರ ಅದನ್ನು ತೊಳೆದುಕೊಳ್ಳಲು ಇರುವ ಪ್ರಾಯಶ್ಚಿತ್ತಗಳು ಅಲ್ಲ, ಸಕಲ ಜೀವಿಗಳು ನೆಮ್ಮದಿಯಿಂದಿರಲು ಬೇಕಾದ ಮಾರ್ಗದರ್ಶನ. ಹುಟ್ಟಿನಿಂದ ಬರುವುದು ಜಾತಿಯಲ್ಲ, ಗುಣಗಳು ಅದಕ್ಕೆ ಕಾರಣ ವಂಶವಾಹಿಗಳು. ಅದನ್ನು ಬದಲಾಯಿಸಲು ಸಾಧ್ಯವಿಲ್ಲವೇ ಹೊರತು ಯಾರೋ ಮಾಡಿದ ಜಾತಿಗಳನ್ನಲ್ಲ.
    ಸ್ವಲ್ಪ ಗಮನಿಸಿ, ಹಿಂದೂ ಸಮಾಜ ಇಂದು ಒಡೆದು ಹೋಗುತ್ತಿರುವುದಕ್ಕೆ ಕಾರಣ ಈ ಜಾತಿ. ನೀವೆಂದಂತೆ ಜಾತಿ ತಡೆ ಗೋಡೆಯಲ್ಲ, ನಮ್ಮ ಸಾಮಾಜಿಕ ಮೌಲ್ಯಗಳು ತಡೆದ ಅಲೆಗಳವು.
    ನಮ್ಮಲ್ಲಿ ಜಾತಿಯೇ ಇಲ್ಲವೆಂದ ಮೇಲೆ ಬದಲಾವಣೆಯ ಬಗ್ಗೆ ಪ್ರಶ್ನೆಯ ಇಲ್ಲ. ಜಾತಿ ಬದಲಾಗಬೇಕಾದರೆ ಮನುಷ್ಯರು ಬೇರೆ ಪ್ರಾಣಿಗಳಾಗಬೇಕು. ಅದು ಸಾಧ್ಯವಿಲ್ಲ ಅಲ್ಲವೇ?

    ವೇದಪುರಾಣಗಳಲ್ಲಿ ಏನು ಹೇಳಿದೆ ಎನ್ನುವುದಕ್ಕಿಂತ, ಆಚರಣೆಯಲ್ಲಿ ಏನಿದೆ ಎನ್ನುವುದೇ ಮುಖ್ಯವೆನಿಸುತ್ತದೆ ಎಂದು ಹೇಳುವಿರಾದರೆ

    ಪ್ರಸ್ತುತ ಸಮಾಜದಲ್ಲಿ ಇಂದು ಕಣ್ಣ ಮುಂದೆ ಇರುವ ಪೆಡಂಭೂತಗಳಂತಹ ಮಾಲಿನ್ಯ ಭಯೋತ್ಪಾದಕತೆ ಲಂಚ ಭ್ರಷ್ಟಾಚಾರ ಅತ್ಯಾಚಾರಗಳನ್ನೂ ನೀವು ಬೆಂಬಲಿಸಬೇಕು ಏಕೆಂದರೆ ಅದು ವಾಸ್ತವ. ಈ ಸಮಸ್ಯಗಳಿಗೆ ಇರುವ ಪರಿಹಾರಗಳು ನಮ್ಮ ವೇದಗಳಲ್ಲಿವೆ. ಅದನ್ನರಿಯುವ ಪ್ರಯತ್ನ ಮಾಡೋಣ. ಅದನ್ನು ಬಿಟ್ಟು ಇಲ್ಲದ ಜಾತಿ ಜಪವನ್ನು, ಅವರು ಮಾಡಿದ ಉದ್ದೇಶವನ್ನು ಹುಡುಕುತ್ತ, ಸಮರ್ಥಿಸುತ್ತ ಕುಳಿತರೆ ಮತ್ತೆ ದಾಳಿಕೋರರಿಗೆ ಗುಲಾಮರಾಗಬೇಕಾದೀತು.

    ನಾವೆಲ್ಲರೂ ಒಂದು. ಈ ಪ್ರತ್ಯುತ್ತರದ ಉದ್ದೇಶ ಯಾರನ್ನೂ ದೂಶಿಸುವುದಲ್ಲ ಅಲ್ಲ. ಕೆಲವಾರು ಅಭಿಪ್ರಾಯ ಭೇದಗಳಿವೆ. ಚರ್ಚಿಸೋಣ

    ಪ್ರತ್ಯುತ್ತರಅಳಿಸಿ
  3. ಸಂಪದಿಗರ ಪ್ರತಿಕ್ರಿಯೆಗಳು:
    ಕವಿಗಳೆ, ಸ್ವಾಮಿ ವಿವೇಕಾನಂದರು ಮೊದಲ ಮೂರು ವರ್ಣಗಳಲ್ಲೇ ನಿಂತು ಹೋಗಿದ್ದ ಗಾಯತ್ರೀ ಮಂತ್ರೋಪಾಸನೆ ಅಥವಾ ಸಂಧ್ಯಾವಂದನೆ ಪುನರುಜ್ಜೀವನಗೊಳಿಸಿದರು. ನಿಮ್ಮ ಗುರುಗಳಾದ ಪಂಡಿತ ಸುಧಾಕರ ಶರ್ಮರವರು ಅದನ್ನು ಎಲ್ಲಾ ವರ್ಣಗಳಿಗೂ ಮತ್ತು ಲಿಂಗದವರಿಗೂ ವಿಸ್ತರಿಸಿ ಶ್ಲಾಘನೀಯ ಕಾರ್ಯ ಮಾಡಿದ್ದಾರೆ. ಶೂದ್ರರಿಗೆ ಸಮಯದ ಅಭಾವವಿದ್ದರೆ ಮತ್ತು ಸ್ತ್ರೀಯರಿಗಿರುವ ನೈಸರ್ಗಿಕ ಸಮಸ್ಯೆಗಳಿಂದಾಗಿ ಅವರಿಗೆ ಸಂಧ್ಯಾವಂದನೆಯಿಂದ ವಿನಾಯತಿ ಕೊಟ್ಟಿದ್ದರೇ ಹೊರತು ಅವರನ್ನು ಇದರಿಂದ ವಂಚಿತರಾಗಿಸಲು ಅಲ್ಲ ಎನ್ನುವುದನ್ನೂ ಸಹ ಇಂದಿನ ನಮ್ಮ ಪೀಳಿಗೆಯವರು ತಿಳಿಯಬೇಕು. ವಂದನೆಗಳೊಂದಿಗೆ,
    - ಶ್ರೀಧರ್ ಬಂಡ್ರಿ
    ***************
    ಕವಿನಾಗರಾಜರೆ, ಬರಿ ಹೆಸರಿನ ಮಟ್ಟಿಗೆ ಮಾತ್ರ ಮಸುಕಾಗಿ ಅರಿವಿದ್ದ ವಿಷಯವನ್ನು ಸಮೂಲಾಗ್ರವಾಗಿ ವಿವರಿಸಿದ್ದೀರ ಲೇಖನದಲ್ಲಿ. ಇದನ್ನು ಬರಿ ವಿಚಾರವಾಗಿಸದೆ, ಆಚಾರದಲ್ಲೂ ನಡೆಸಿಕೊಂಡು ಬರುತ್ತಿದ್ದೀರಾ. ಅಭಿನಂದನೆಗಳು.
    -ನಾಗೇಶ ಮೈಸೂರು
    *******************
    ಗುರು-ಶಿಷ್ಯ ಪರಂಪರೆಯ ಬಿಂಬಿಸುವ ಉತ್ತಮ ಚಿತ್ರ ಮತ್ತು ಉತ್ತಮ ಹಾಡು ಎಂದು ಫೇಸ್ಬುಕ್’ನಲ್ಲಿ ಈಗ ತಾನೇ "ಹಾಕಿದ ಜನಿವಾರವಾ" ಹಾಡಿನ ಕೊಂಡಿ ಹಾಕಿದೆ. ಇಲ್ಲಿ ಬಂದು ನೋಡಿದರೆ ಯಜ್ಞ್ನೋಪವೀತದ ಬಗ್ಗೆ ಲೇಖನ. ಎರಡೂ ವಿಚಾರ ಎಂಥ ಬೆಸುಗೆ :-)
    -ಭಲ್ಲೆ.

    ಪ್ರತ್ಯುತ್ತರಅಳಿಸಿ