ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಶುಕ್ರವಾರ, ಫೆಬ್ರವರಿ 1, 2013

ವೇದೋಕ್ತ ಜೀವನ ಪಥ: ದೈನಂದಿನ ಪಂಚಮಹಾಯಜ್ಞಗಳು - ೨.ದೇವಯಜ್ಞ


     ಎರಡನೆಯ ಮಹಾಯಜ್ಞ ದೇವಯಜ್ಞ. ಇದೂ ಕೂಡ ಸೂರ್ಯೋದಯ-ಸೂರ್ಯಾಸ್ತ ಸಮಯಗಳಲ್ಲಿ ಮಾಡಬೇಕಾದ ದೈನಿಕ ಕ್ರಿಯೆ. ಇದನ್ನು ಹವನ, ಹೋಮ, ಅಗ್ನಿಹೋತ್ರ ಈ ಮೊದಲಾದ ಹೆಸರುಗಳಿಂದಲೂ ಕರೆಯುತ್ತಾರೆ. ಇದು ಆಧ್ಯಾತ್ಮಿಕ ಹಾಗೂ ಭೌತಿಕ - ಎರಡೂ ದೃಷ್ಟಿಗಳಿಂದಲೂ ಆಚರಣೀಯ. ಹಸನಾದ ಗೋವಿನ ತುಪ್ಪ, ಶಾಸ್ತ್ರೋಕ್ತವಾಗಿ ನಿರ್ಮಿಸಿದ ಹವ್ಯದ್ರವ್ಯ, ಉತ್ತಮವಾದ ಸಮಿತ್ತು - ಇವುಗಳನ್ನು ಅಗ್ನಿಯಲ್ಲಿ ಆಹುತಿಯಾಗಿ ಕೊಡುವುದರಿಂದ ಹೋಮಧೂಮ ವಾತಾವರಣದಲ್ಲಿನ ರೋಗಾಣುಗಳನ್ನು ನಾಶಪಡಿಸಿ, ಸುಗಂಧವನ್ನು ಹರಡಿ, ಮನಸ್ಸಿಗೆ ಉಲ್ಲಾಸವನ್ನೂ, ದೇಹಕ್ಕೆ ಆರೋಗ್ಯವನ್ನೂ ನೀಡುತ್ತದೆ. ಒಬ್ಬನು ತಿನ್ನಬಹುದಾದ ಪ್ರಮಾಣದ ಘೃತ ನೂರಾರು ಉಸಿರಾಡುವ ಮಂದಿಗಳಿಗೆ ಲಾಭವನ್ನುಂಟುಮಾಡುತ್ತದೆ. ಆಧ್ಯಾತ್ಮಿಕ ದ್ಟೃಂದ, ಈ ದೇವಯಜ್ಞ ಒಂದು ಅದ್ಭುತ ವರದಾನವೇ ಆಗಿದೆ. ವಿನಿಯೋಗಿಸುವ ಒಂದೊಂದು ಮಂತ್ರದಲ್ಲಿಯೂ ಆಧ್ಯಾತ್ಮಿಕ ತತ್ತ್ವ ತುಳುಕುತ್ತದೆ. ಅಗ್ನ್ಯುದ್ದೀಪನದ ಮಂತ್ರ ಆತ್ಮವನ್ನು ಸುಪ್ತಾವಸ್ಥೆಯಿಂದ ಹೊಡೆದೆಬ್ಬಿಸುತ್ತದೆ:- ಉದ್ಬುಧಸ್ಯಾಗ್ನೇ ಪ್ರತಿ ಜಾಗೃಹಿತ್ವಮ್|| (ಯಜು. ೧೫.೫೪) ಓ ಶರೀರನೇತೃ ಜೀವ, ಎಚ್ಚರನಾಗು, ಜಾಗರೂಕನಾಗು. ಮತ್ತು 'ಇದಂ ನ ಮಮ' ಎಂಬ ಘೋಷಣೆ, ಹೃದಯದಲ್ಲಿನ ಸ್ವಾರ್ಥಭಾವನೆಯ ಬುಡಕ್ಕೆ ಕೊಡಲಿಪೆಟ್ಟು ಹಾಕಿ, ಹೃದಯವನ್ನು ಉದಾರವಾಗಿ ಮಾಡುತ್ತದೆ. ಅಗ್ನಿಹೋತ್ರದ ವಿಷಯದಲ್ಲಿ, ಈ ಕೆಳಗಿನ ವೇದಮಂತ್ರಗಳು ಸದಾ ಮನನೀಯ:-

ಸಾಯಂಸಾಯಂ ಗೃಹಪತಿನೋ ಅಗ್ನಿಃ ಪ್ರಾತಃಪ್ರಾತಃ ಸೌಮನಸಸ್ಯ ದಾತಾ |
ವಸೋರ್ವಸೋರ್ವಸುದಾನ ಏಧಿ ವಯಂ ತ್ವೇಂಧಾನಾಸ್ತನ್ವಂ ಪುಷೇಮ | (ಅಥರ್ವ.೧೯.೫೫.೩.)
     [ಸಾಯಂಸಾಯಂ] ಸಂಜೆ ಸಂಜೆ ಹೊತ್ತಿಸಿದ [ನಃ ಗೃಹಪತಿಃ ಅಗ್ನಿಃ] ನಮ್ಮ ಗೃಹರಕ್ಷಕವಾದ ಹೋಮಾಗ್ನಿ, [ಪ್ರಾತಃಪ್ರಾತಃ] ಬೆಳಗು ಬೆಳಗಿನವರೆಗೆ [ಸೌಮನಸಸ್ಯ ದಾತಾ] ಮಾನಸಿಕ ಉಲ್ಲಾಸವನ್ನು ಕೊಡುವಂತಹದಾಗಿದೆ. ಹೇ ಯಜ್ಞಾಗ್ನಿ, [ವಸೋರ್ವಸೋರ್ವಸುದಾನಃ] ಜೀವ ಜೀವನಿಗೂ ಸಂಪತ್ತನ್ನು ನೀಡುತ್ತಾ, [ಏಧಿ] ಪ್ರಾಪ್ತನಾಗು. [ವಯಮ್] ನಾವು [ತ್ವಾಂ ಇಂಧಾನಾಃ} ನಿನ್ನನ್ನು ಪ್ರದೀಪ್ತಗೊಳಿಸುತ್ತಾ [ತನ್ವಂ ಪುಷೇಮ] ದೇಹಶಕ್ತಿಯನ್ನು ಪೋಷಿಸಿಕೊಳ್ಳೋಣ.

ಪ್ರಾತಃಪ್ರಾತರ್ಗೃಹಪತಿನೋ ಅಗ್ನಿಃ ಸಾಯಂಸಾಯಂ ಸೌಮನಸಸ್ಯ ದಾತಾ |
ವಸೋರ್ವಸೋರ್ವಸುದಾನ ಏಧೀಂಧಾನಾಸ್ತ್ಯಾ ಶತಂಹಿಮಾ ಋಧೇಮ || (ಅಥರ್ವ.೧೯.೫೫.೪)
     [ಪ್ರಾತಃ ಪ್ರಾತಃ] ಬೆಳಗ್ಗೆ ಬೆಳಗ್ಗೆ ಹೊತ್ತಿಸಿದ, [ನಃ ಗೃಹಪತಿಃ ಅಗ್ನಿಃ] ನಮ್ಮ ಗೃಹರಕ್ಷಕ ಹೋಮಾಗ್ನಿ [ಸಾಯಂ ಸಾಯಂ] ಸಂಜೆ ಸಂಜೆಯವರೆಗೆ [ಸೌಮನಸಸ್ಯ ದಾತಾ] ಮನಃಪ್ರಸಾದವನ್ನು ಕೊಡುವಂತಹುದಾಗಿದೆ. [ವಸೋರ್ವಸೋರ್ವಸುದಾನಃ] ಜೀವ ಜೀವನಿಗೂ ಐಶ್ವರ್ಯವನ್ನು ತುಂಬಿಸಿಕೊಡುತ್ತಾ [ಏಧಿ] ಪ್ರಾಪ್ತನಾಗು. [ತ್ವಾ ಇಂಧಾನಾಃ] ನಿನ್ನನ್ನು ಉಜ್ವಲಗೊಳಿಸುತ್ತಾ [ಶತಂ ಹಿಮಾ ಋಧೇಮ] ನೂರು ವರ್ಷಗಳವರೆಗೆ ವೃದ್ಧಿ ಹೊಂದೋಣ.

     ಹೋಮದಲ್ಲಿ ಹಾಕಿದ ವಸ್ತುಗಳು ಹಾಳಾಗುತ್ತವೆಂದು ಹೇಳುವವರಿಗೆ ಪದಾರ್ಥವಿಜ್ಞಾನದ ಅರಿವಿಲ್ಲ. ಯಾವ ವಸ್ತುವೂ ನಾಶವಾಗುವುದಿಲ್ಲ. ರೂಪಾಂತರ ಹೊಂದಿ, ವಾಯುಮಂಡಲದಲ್ಲಿ ಸೂಕ್ಷ್ಮ ರೂಪದಿಂದ ಸೇರಿ, ಎಲ್ಲರಿಗೂ ಹಿತವನ್ನುಂಟುಮಾಡುತ್ತದೆ. ಹೋಮಾಗ್ನಿಯಿಂದ ಮನಸ್ಸು ಶರೀರಗಳಿಗೆ ಉಲ್ಲಾಸ; ಆಧ್ಯಾತ್ಮಿಕ ದೃಷ್ಟಿಯಿಂದ, ಜಗನ್ನಿಯಾಮಕನಾದ ತೇಜಃಸ್ವರೂಪ ಪರಮಾತ್ಮನ ಧ್ಯಾನ, ಚಿಂತನ, ಮನನಗಳಿಂದ ಆತ್ಮನಿಗೆ ಉತ್ಕರ್ಷ. ಹೀಗೆ ದ್ವಿವಿಧ ಲಾಭದಾಯಕ ಈ ದೇವಯಜ್ಞ. ಇದು ಬ್ರಹ್ಮಚಾರಿಗಳು, ಗೃಹಸ್ಥರು ಮತ್ತು ವಾನಪ್ರಸ್ಥಿಗಳಿಗೆ ಅನಿವಾರ್ಯ. ಸಂನ್ಯಾಸಿಗಳು ಸದಾ ಸಂಚಾರಿಗಳಾದ ಕಾರಣ ಮತ್ತು ಹೋಮದ ಸಲಕರಣೆಗಳನ್ನು ಹೊತ್ತು ತಿರುಗುವ ವಿಧಾನವಿಲ್ಲದ ಕಾರಣ, ದೇವಯಜ್ಞ ಅವರಿಗಿಲ್ಲ.
-ಪಂ. ಸುಧಾಕರ ಚತುರ್ವೇದಿ.
**************************

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ